ಬನಿಹಾಲ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಹಿಮಪಾತ ಮತ್ತು ಭೂ ಕುಸಿತ ಸಂಭವಿಸಿರುವುದರಿಂದ ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಮಂಗಳವಾರ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
‘ಜವಾಹರ್ ಸುರಂಗ ಪ್ರದೇಶದಲ್ಲಿ ಹಿಮಪಾತ ಸಂಭವಿಸಿದ್ದು, ಬನಿಹಾಲ್ ಮತ್ತು ಚಂದರ್ಕೋಟೆಯ ನಡುವೆ ಭೂ ಕುಸಿತ ಸಂಭವಿಸಿದೆ. ಇದರಿಂದಾಗಿ ಜಮ್ಮು–ಶ್ರೀನಗರ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಹೆದ್ದಾರಿಯ ಎರಡೂ ಬದಿಗಳಲ್ಲಿ 300ಕ್ಕೂ ಹೆಚ್ಚು ವಾಹನಗಳು ಸಿಲುಕಿವೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಮಂಗಳವಾರ ಬೆಳಿಗ್ಗೆ ಜವಾಹರ್ ಸುರಂಗ ಪ್ರದೇಶದಲ್ಲಿ ಹಿಮಪಾತ ಸಂಭವಿಸಿದೆ. ಹಾಗಾಗಿ ಬನಿಹಾಲ್ ಮತ್ತು ಖಾಜಿಗುಂಡ್ ನಡುವೆಯೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಹೇಳಿದರು.
ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಸರ್ವಋತು ರಸ್ತೆಯ ಹಲವು ಭಾಗಗಳಲ್ಲಿ ಮೂರನೇ ದಿನವೂ ಮಳೆ ಸುರಿದಿದೆ. ಇದರಿಂದಾಗಿ ಭೂ ಕುಸಿತ ಸಂಭವಿಸಿದೆ.