ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿನರೇಗಾ) ಯೋಜನೆಗೆ ಕೇಂದ್ರವು ಬಜೆಟ್ನಲ್ಲಿ ಅನುದಾನ ಕಡಿತ ಮಾಡಿದೆ. ಇದರಿಂದಾಗಿ ಹಲವು ರಾಜ್ಯ ಸರ್ಕಾರಗಳು ಕೆಲಸಗಾರರಿಗೆ ₹ 5000 ಕೋಟಿ ಬಾಕಿ ಉಳಿಸಿಕೊಂಡಿವೆ ಎಂದುಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ನರೇಗಾ ಯೋಜನೆಯಿಂದ ಅನುಕೂಲವಾಗಿದೆ. ಈ ಯೋಜನೆಗೆ ಅಗತ್ಯವಿರುವಷ್ಟು ಹಣವನ್ನು ನೀಡಬೇಕು. ಕೂಲಿಕಾರರಿಗೆ 15 ದಿನಗಳಲ್ಲಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು' ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಸೋನಿಯಾ ಅವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ನರೇಗಾ ಯೋಜನೆಗೆ 2013-14ರಲ್ಲಿ ಯುಪಿಎ ಸರ್ಕಾರ ₹33,000 ಕೋಟಿ ಅನುದಾನ ನೀಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದನ್ನು ₹1.12 ಲಕ್ಷ ಕೋಟಿಗೆ ಏರಿಸಿದೆ. ನಮಗೆ ಕನ್ನಡಿ ತೋರಿಸುವ ಅಗತ್ಯವಿಲ್ಲ ಎಂದುಗಿರಿರಾಜ್ ಸಿಂಗ್ ಅವರು ಸೋನಿಯಾ ವಿರುದ್ಧ ವಾಗ್ದಾಳಿ ನಡೆಸಿದರು.