ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಶನಿವಾರ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕೋವಿಡ್- 19 ಎರಡನೇ ಅಲೆಯ ಸ್ಥಿತಿ ಹಾಗೂ ಲಸಿಕೆ ಅಭಿಯಾನ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ವರ್ಚುವಲ್ ಸಭೆ ಮೂಲಕ ಕಾಂಗ್ರೆಸ್ ಆಡಳಿತವಿರುವ ಹಾಗೂ ಮೈತ್ರಿ ಪಕ್ಷಗಳೊಂದಿಗೆ ಕಾಂಗ್ರೆಸ್ ಅಧಿಕಾರ ಹಂಚಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರೊಂದಿಗೆ ಸೋನಿಯಾ ಗಾಂಧಿ ಮಾತನಾಡಿದರು. ‘ಕೊರೊನಾ ಸೋಂಕಿನ ವಿಚಾರದಲ್ಲಿ ಸೋಂಕು ಪರೀಕ್ಷೆ, ಸೋಂಕಿತರ ಪತ್ತೆ ಮತ್ತು ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡಿ‘ ಎಂದು ಸಲಹೆ ನೀಡಿದರು.
‘ಇದೇ ವೇಳೆ ಲಸಿಕೆಗಳ ಲಭ್ಯತೆ, ಔಷಧ ಮತ್ತು ವೆಂಟಿಲೇಟರ್ಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆದುಕೊಂಡರು‘ ಎಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಸೋನಿಯಾ ಗಾಂಧಿ, ‘ಕೋವಿಡ್– 19 ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪರೀಕ್ಷೆ ಮಾಡಿ, ಸೋಂಕಿತರನ್ನು ಪತ್ತೆ ಮಾಡಿ ಮತ್ತು ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡಿ‘ ಎಂದಿದ್ದಾರೆ.