ನವದೆಹಲಿ: ನಿಗದಿತ ದಿನಕ್ಕಿಂತ ಐದು ದಿನಗಳು ವಿಳಂಬವಾಗಿ ದೇಶವನ್ನು ಪ್ರವೇಶಿಸಿರುವ ನೈರುತ್ಯ ಮುಂಗಾರು ಮಾರುತಗಳು ಮಂಗಳವಾರದ ವೇಳಗೆ ಇಡೀ ದೇಶವನ್ನೇ ವ್ಯಾಪಿಸಿದ್ದು, ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಸಾಮಾನ್ಯವಾಗಿ ಜುಲೈ 8ರ ವೇಳೆಗೆ ದೇಶದಾದ್ಯಂತ ನೈರುತ್ಯ ಮುಂಗಾರು ಮಾರುತಗಳ ವ್ಯಾಪಿಸುತ್ತದೆ. ಆದರೆ, ಈ ವರ್ಷದ ಐದು ದಿನ ವಿಳಂಬವಾಗಿದೆ. ಸೋಮವಾರ ರಾಜಸ್ಥಾನದ ಜೈಸಲ್ಮೇರ್ ಮತ್ತು ಗಂಗಾನಗರ ವ್ಯಾಪ್ತಿಯಲ್ಲಿ ಮಳೆ ಆರಂಭವಾಗಿದೆ.
ಮಂಗಳವಾರ ಎನ್ಸಿಆರ್ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಮಾರುತಗಳು ದೆಹಲಿಯನ್ನೂ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
’ನಾಲ್ಕು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ನಿರಂತರವಾಗಿ ತೇವಾಂಶವುಳ್ಳ ಗಾಳಿ ಬೀಸುತ್ತಿರುವುರಿಂದ, ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳೆಯಾಗುತ್ತಿದೆ’ ಎಂದು ಐಎಂಡಿ ಹೇಳಿದೆ.