ಅಹಮದಾಬಾದ್: ತನಿಖಾ ಸಂಸ್ಥೆಗಳ ಸಿಬ್ಬಂದಿ ತನ್ನ ವಶದಲ್ಲಿರುವ ಆರೋಪಿಗೆ ಕಿರುಕುಳವನ್ನು ನೀಡುವುದು ‘ಅತಿ ಕೆಟ್ಟ ಅಪರಾಧ’ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಹೇಳಿದೆ.
ದೆಹಲಿ ಜಾಮ್ನಗರದ ವಾಯುಪಡೆ–1ರಲ್ಲಿ ಅಡುಗೆ ಕೆಲಸಕ್ಕಿದ್ದ ಗಿರ್ಜಾ ರಾವತ್,ವಾಯುಪಡೆಯ ಕ್ಯಾಂಟಿನ್ನಿಂದ ಮದ್ಯದ ಬಾಟಲಿ ಕಳವು ಮಾಡಿದ್ದಾನೆ ಎಂಬ ಶಂಕೆಯ ಮೇಲೆ ಮೂವರು ಅಧಿಕಾರಿಗಳು ಕಿರುಕುಳ ನೀಡಿ ಆತನ ಸಾವಿಗೆ ಕಾರಣರಾಗಿದ್ದರು.
ಈ ಪ್ರಕರಣದಲ್ಲಿ ಮೂವರು ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನಿಖಿಲ್ ಡಿ.ದೋಶಿ ಈ ಕುರಿತ ತೀರ್ಪು ಪ್ರಕಟಿಸಿದರು
ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಫ್ಟನ್ ಅನೂಪ್ ಸೂದ್, ಸಾರ್ಜೆಂಟ್ ಅನಿಲ್ ಕೆ.ಎನ್ (ಇಬ್ಬರೂ ನಿವೃತ್ತರು) ಮತ್ತು ಸಾರ್ಜೆಂಟ್ ಮಹೇಂದ್ರ ಸಿಂಗ್ ಶೆರಾವತ್ ಶಿಕ್ಷೆಗೊಳಗಾದವರು.
ಐಪಿಸಿ ಸೆಕ್ಷನ್ 302 (ಕೊಲೆ), 331, 348 (ತಪ್ಪೊಪ್ಪಿಕೊಳ್ಳುವಂತೆ ಕಾನೂನುಬಾಹಿರ ಕ್ರಮ ಅನುಸರಿಸುವುದು), 120 ಬಿ (ಸಂಚು) ಅನ್ವಯ ಈ ಮೂವರನ್ನು ಅಪರಾಧಿಗಳು ಎಂದು ಕೋರ್ಟ್ ಘೋಷಿಸಿತು.