ನವದೆಹಲಿ:ಪತಿ, ಪತ್ನಿಯರನ್ನೂ ಒಳಗೊಂಡಂತೆ ತನ್ನ ಉದ್ಯೋಗಿಗಳ ಅಂತರ ಕಮಿಷನರೇಟ್ ವರ್ಗಾವಣೆ ನೀತಿಯನ್ನು ರೂಪಿಸುವಾಗ ಸರ್ಕಾರವು ವ್ಯಕ್ತಿಯ ಕೌಟುಂಬಿಕ ಜೀವನವನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಬೇಕು ಎಂದುಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಕೌಟುಂಬಿಕ ಜೀವನವನ್ನು ನಿರ್ವಹಿಸುವ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಲು ನೀತಿಯಲ್ಲಿ ಏನೆಲ್ಲ ಮಾರ್ಪಾಡು ಮಾಡಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಕೌಟುಂಬಿಕ ಜೀವನವು ಸಂವಿಧಾನದ 21ನೇ ವಿಧಿಯಡಿ ಬರುವುದರಿಂದ ಇದನ್ನು ಸಂರಕ್ಷಿಸುವುದು ಸರ್ಕಾರದ ಕೆಲಸ. ಈ ವಿಷಯವನ್ನು ಸರ್ಕಾರ ನಿರ್ಲಕ್ಷಿಸ ಬಾರದು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ ಹೇಳಿದೆ.
ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಅಂತರ ಕಮಿಷನರೇಟ್ ವರ್ಗಾವಣೆಯ ಸುತ್ತೋಲೆಯನ್ನು ಅಮಾನ್ಯ ಮಾಡಿದ್ದ ಕೇರಳ ಹೈಕೋರ್ಟ್ನ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಸುತ್ತೋಲೆಯು ಪ್ರತಿ ಕೇಡರ್ನ ವಿಶಿಷ್ಟ ಗುರುತನ್ನು ಉಲ್ಲಂಘಿಸುತ್ತದೆ ಎಂದು ಕಾರಣ ನೀಡಿ ಹೈಕೋರ್ಟ್ ಅದನ್ನು ಅಮಾನ್ಯಗೊಳಿಸಿತ್ತು.
ಸಂಗಾತಿಗಳ ವರ್ಗಾವಣೆ, ಅಂಗವಿಕಲರ ಅಗತ್ಯತೆಗಳು ಮತ್ತು ಸಹಾನುಭೂತಿಯ ಆಧಾರದ ಮೇಲೆ ವರ್ಗಾವಣೆ ನೀತಿಯನ್ನು ಮರುಪರಿಶೀಲಿಸಲು ಪ್ರತಿವಾದಿ (ಕೇಂದ್ರ ಸರ್ಕಾರ) ಗಮನಹರಿಸಬೇಕು ಎಂದು ಪೀಠ ಹೇಳಿದೆ.