ನವದೆಹಲಿ: ‘ಸುಪ್ರೀಂ ಕೋರ್ಟ್ ಜೂನ್ 24ರಂದು ನೀಡಿದ್ದ ತೀರ್ಪಿಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ಗೂ ಯಾವುದೇ ಸಂಬಂಧವಿಲ್ಲ. ಸೂಕ್ತ ಸಾಕ್ಷ್ಯಗಳ ಆಧಾರದಲ್ಲಿ ಅವರ ವಿರುದ್ಧ ಬಲವಾದ ಪ್ರಕರಣ ದಾಖಲಿಸಲಾಗಿದೆ’ ಎಂದು ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ.
2002ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಸಿಲುಕಿಸಲು ಹುಸಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಪ್ರಕರಣದಲ್ಲಿ ಸೆಟಲ್ವಾಡ್ ಅವರನ್ನು ಬಂಧಿಸಲಾಗಿತ್ತು.
‘ನಿರಪರಾಧಿಗಳನ್ನು ಸಿಲುಕಿಸಲು ಹುಸಿ ದಾಖಲೆಗಳನ್ನು ಸೃಷ್ಟಿಸಿರುವುದು ಸೇರಿದಂತೆ ಇತರೆ ಗಂಭೀರ ಆರೋಪಗಳು ತೀಸ್ತಾ ವಿರುದ್ಧ ಇವೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಗುಜರಾತ್ನ ಎಸ್ಐಟಿ ಹೇಳಿದೆ.
‘ಅರ್ಜಿದಾರರು (ತೀಸ್ತಾ) ಹಾಗೂ ಪ್ರಕರಣದ ಇತರ ಆರೋಪಿಗಳು ರಾಜಕೀಯ, ಹಣಕಾಸಿನ ಹಾಗೂ ಇತರೆ ಲಾಭದ ಉದ್ದೇಶದಿಂದ ಹಲವು ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿದ್ದರು. ರಾಜಕೀಯ ಪಕ್ಷವೊಂದರ ಹಿರಿಯ ನಾಯಕರ ಸೂಚನೆ ಮೇರೆಗೆ ಹಲವರ ವಿರುದ್ಧ ಸಂಚು ರೂಪಿಸಿರುವುದಕ್ಕೆ ಸಾಕ್ಷ್ಯಗಳೂ ದೊರೆತಿವೆ’ ಎಂದು ಉಲ್ಲೇಖಿಸಿದೆ.