ಶುಕ್ರವಾರ, ಮಾರ್ಚ್ 31, 2023
23 °C

ವಿದ್ಯಾರ್ಥಿಗಳು ವರದಕ್ಷಿಣೆ ವಿರೋಧಿ ಕರಾರುಪತ್ರಕ್ಕೆ ಸಹಿಹಾಕಲಿ: ಕೇರಳ ರಾಜ್ಯಪಾಲ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೊಚ್ಚಿ: ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರಗಳನ್ನು ಪಡೆಯುವ ಮೊದಲು ತಾವು ವರದಕ್ಷಿಣೆ ಪಡೆಯುವುದಿಲ್ಲ ಮತ್ತು ನೀಡುವುದಿಲ್ಲ ಎಂಬ ಕರಾರುಪತ್ರಕ್ಕೆ ಸಹಿಹಾಕುವಂತೆ ಮಾಡಬೇಕು ಎಂದು ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸಲಹೆ ನೀಡಿದ್ದಾರೆ.

ʼವಿದ್ಯಾರ್ಥಿಗಳಿಗೆ ದಾಖಲಾತಿ ಸಂದರ್ಭದಲ್ಲಿ ಮಾತ್ರವಲ್ಲದೆ, ಅವರಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡುವ ಮುನ್ನ ಅವರು ವರದಕ್ಷಿಣೆ ಕರಾರುಪತ್ರಕ್ಕೆ ಸಹಿಹಾಕುವಂತೆ ಮಾಡಬೇಕು. ಜೊತೆಗೆ ವಿಶ್ವವಿದ್ಯಾಲಯದಲ್ಲಿ ನೇಮಕಗೊಳ್ಳುವ ಪ್ರತಿಯೊಬ್ಬರಿಗೂ ಈ ಕರಾರುಪತ್ರಕ್ಕೆ ಸಹಿಹಾಕುವಂತೆ ಸೂಚಿಸಬೇಕುʼ ಎಂದು ಖಾನ್‌ ಹೇಳಿದ್ದಾರೆ.

ʼಕರಾರುಪತ್ರಕ್ಕೆ ಸಹಿ ಮಾಡುವುದು ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಬಾರದು. ಸಿಬ್ಬಂದಿಯೂ ಸಹಿ ಮಾಡುವಂತಾಗಬೇಕು. ಉಪಕುಲಪತಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಮದುವೆ ಮಾರುಕಟ್ಟೆಯಲ್ಲಿ ವದು-ವರರ ಬೆಲೆ ಹೆಚ್ಚಿಸಲು ಪದವಿ ಪತ್ರಗಳು ನೆರವಾಗುವುದಕ್ಕೆ ವಿಶ್ವವಿದ್ಯಾಲಯಗಳು ಅನುಮತಿಸಬಾರದುʼ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಬೇಡ ಎಂದ ವರನಿಗೆ 1000 ಪುಸ್ತಕ ಉಡುಗೊರೆಯಾಗಿ ಕೊಟ್ಟ ಮಾವ!

ಮುಂದುವರಿದು, ʼಇದು ಕೇವಲ ಮಹಿಳೆಯರ ವಿಚಾರವಲ್ಲ. ಇದು ಮನುಕುಲದ ಸಮಸ್ಯೆ. ಏಕೆಂದರೆ ನೀವು ಮಹಿಳೆಯರನ್ನು ಕುಗ್ಗಿಸಿದರೆ, ಇಡೀ ಸಮಾಜವೇ ಕೆಳಗುರುಳುತ್ತದೆ. ವರದಕ್ಷಿಣೆಗಾಗಿ ಬೇಡಿಕೆ ಇಡುವುದು ಮಹಿಳೆಯರು ಮತ್ತು ಮನುಕುಲದ ಘನತೆಗೆ ತಕ್ಕುದಲ್ಲʼ ಎಂದು ರಾಜ್ಯಪಾಲ ಅಭಿಪ್ರಾಯಪಟ್ಟಿದ್ದಾರೆ.

ವರದಕ್ಷಿಣೆ ಪದ್ಧತಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಉದ್ದೇಶದಿಂದ ಖಾನ್ ಅವರು ತಿರುವನಂತಪುರಂನಲ್ಲಿರುವ ರಾಜಭವನದ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಒಂದು ದಿನ ಉಪವಾಸ ನಡೆಸಿದ್ದರು.

‌‌‌ಗಾಂಧಿ ಸ್ಮಾರಕ ನಿಧಿ ಮತ್ತಿತರ ಸಂಘಟನೆಗಳ ಸಹಯೋಗದವರು ಕರೆ ನೀಡಿದ್ದ ವರದಕ್ಷಿಣೆ ಪದ್ಧತಿ ವಿರುದ್ಧದ ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಅವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.‌

ಇದನ್ನೂ ಓದಿ: ವರದಕ್ಷಿಣೆ ಪದ್ಧತಿ ವಿರುದ್ಧ ಸಾಮಾಜಿಕ ಜಾಗೃತಿ–ಕೇರಳ ರಾಜ್ಯಪಾಲರಿಂದ ಉಪವಾಸ ಆರಂಭ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು