ಸುರಿ, ಪಶ್ಚಿಮ ಬಂಗಾಳ: ವಿಧಾನಸಭೆಯ ವಿರೋಧಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಅವರು ಸೋಮವಾರ ಇಲ್ಲಿನ ಕಾಳಿ ದೇವಸ್ಥಾನದಲ್ಲಿ ಸ್ಥಳೀಯ ಸುರಿ ನಗರಸಭೆಯ ಇಬ್ಬರು ಟಿಎಂಸಿ ಸದಸ್ಯರ ಜೊತೆಗೆ ಕಾಣಿಸಿಕೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಬಿರ್ಭುಮ್ ಜಿಲ್ಲೆಯ ಸುರಿ ಪಟ್ಟಣದ ಕಾಳಿ ದೇವಸ್ಥಾನದಲ್ಲಿ ಅಧಿಕಾರಿ ಮತ್ತು ಸುರಿ ನಗರಸಭೆಯ ಮಾಜಿ ಅಧ್ಯಕ್ಷರೂ ಆದ ಉಜ್ವಲ್ ಚಟರ್ಜಿ ಮತ್ತು ಸದಸ್ಯ ಕುಂದನ್ ಡೇ ಅವರ ನಡುವೆ ಸಭೆ ನಡೆದಿದೆ. ಸುವೇಂದು ಅಧಿಕಾರಿ ಅವರೇ ಈ ಸಭೆಯ ಚಿತ್ರವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
— Suvendu Adhikari • শুভেন্দু অধিকারী (@SuvenduWB) October 23, 2022
ಸದ್ಯ, ಪುರಿ ನಗರಸಭೆ ಅಧ್ಯಕ್ಷರಾಗಿರುವ ಅನುಬ್ರತಾ ಮೊಂಡಲ್ ಅವರು ಜಾನುವಾರುಗಳ ಕಳ್ಳಸಾಗಣೆ ಪ್ರಕರಣದ ಸಂಬಂಧ ಸಿಬಿಐ ವಶದಲ್ಲಿದ್ದಾರೆ. ಮೊಂಡಲ್ ಅವರನ್ನು ಈ ಹಿಂದೆ ಅಧಿಕಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ನಂದಿಗ್ರಾಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಧಿಕಾರಿ ಈ ಹಿಂದೆ ಟಿಎಂಸಿಯಲ್ಲಿ ಇದ್ದರು.
ಸುವೇಂದು ಅಧಿಕಾರಿ ಅವರ ಜೊತೆಗಿನ ಭೇಟಿ ಕಾಕತಾಳೀಯವಾಗಿದ್ದು, ಇದಕ್ಕೆ ಯಾವುದೇ ರಾಜಕೀಯ ಮಹತ್ವವಿಲ್ಲ ಎಂದು ಸುರಿ ನಗರಸಭೆಯ ಇಬ್ಬರು ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ‘ನಾನು ಪ್ರತಿವರ್ಷ ದೇವಸ್ಥಾನಕ್ಕೆ ಹೋಗುತ್ತೇನೆ. ಭಾನುವಾರ ಅಚಾನಕ್ಕಾಗಿ ಭೇಟಿಯಾಯಿತು’ ಎಂದು ಚಟರ್ಜಿ ಪ್ರತಿಕ್ರಿಯಿಸಿದರು.