ನವದೆಹಲಿ (ಪಿಟಿಐ): ತಮ್ಮ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಉದ್ಯಮಿ ಸುಖೇಶ್ ಚಂದ್ರಶೇಖರ್ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸೂಚಿಸಿದೆ.
ಆರೋಪಿ ಪರ ವಕೀಲ ಮತ್ತು ಇ.ಡಿ. ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮ, ‘ಈ ಪ್ರಕರಣವು ಮತ್ತಷ್ಟು ಪರಿಶೀಲನೆಗೆ ಒಳಗಾಗಬೇಕಿದೆ’ ಎಂದರು. ಜೊತೆಗೆ, ಲಿಖಿತ ಹೇಳಿಕೆ ಸಲ್ಲಿಸುವಂತೆ ಉಭಯ ಬಣದವರಿಗೂ ನಿರ್ದೇಶಿಸಿದರು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ನಿಗದಿಪಡಿಸಿದರು.
ಚುನಾವಣಾ ಆಯೋಗಕ್ಕೆ ಲಂಚ ನೀಡುವುದಾಗಿ ಎಐಡಿಎಂಕೆ ನಾಯಕರೊಬ್ಬರಿಂದ ಹಣ ಪಡೆದಿರುವುದೂ ಸೇರಿದಂತೆ, ಇನ್ನೂ ಕೆಲ ಸುಲಿಗೆ ಆರೋಪಗಳು ಸುಖೇಶ್ ಮೇಲಿವೆ.