ನವದೆಹಲಿ: ವರ್ಚುವಲ್ ಕೋರ್ಟ್ ವಿಚಾರಣೆಯನ್ನು ಅರ್ಜಿದಾರರ ಮೂಲಭೂತ ಹಕ್ಕೆಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಮತ್ತು ಪಿ.ಎಸ್. ನರಸಿಂಹ ಅವರಿದ್ದ ನ್ಯಾಯಪೀಠವು ವಕೀಲ ಸಿದ್ಧಾರ್ಥ್ ಲೂಥರಾ ಅವರಿಗೆ ತಿಳಿಸಿದೆ.
ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದರಿಂದ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ವಕೀಲರು ಮನವಿ ಮಾಡಿದ್ದರು.
‘ಸದ್ಯಕ್ಕೆ ಈ ಅನಿವಾರ್ಯತೆ ಎದುರಾಗಿಲ್ಲ. ಎಲ್ಲ ಜನರೂ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟರೆ ಮುಂದೆ ನೋಡೋಣ. ಜೈಲು, ಜಾಮೀನಿನಂತಹ ಅನೇಕ ತುರ್ತು ಪ್ರಕರಣಗಳ ವಿಚಾರಣೆಯಾಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.
ವರ್ಚುವಲ್ ವಿಚಾರಣೆಯಲ್ಲಿ ಹಲವು ಸಮಸ್ಯೆಗಳಿವೆ. ನ್ಯಾಯಾಲಯಗಳು ಇದನ್ನು ಮುಂದುವರಿಸುವುದರಿಂದ ಸಮಸ್ಯೆಯಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಹೇಳಿತ್ತು.
ವರ್ಚುವಲ್ ಕೋರ್ಟ್ ವಿಚಾರಣೆಯನ್ನು ಅರ್ಜಿದಾರರ ಮೂಲಭೂತ ಹಕ್ಕೆಂದು ಘೋಷಿಸುವಂತೆ ಮನವಿ ಮಾಡಿ ಸ್ವಯಂಸೇವಾ ಸಂಸ್ಥೆ ‘ನ್ಯಾಷನಲ್ ಫೆಡರೇಷನ್ ಆಫ್ ಸೊಸೈಟೀಸ್ ಫಾರ್ ಜಸ್ಟೀಸ್’ ಹಾಗೂ ಕೆಲವು ಮಂದಿ ನಾಗರಿಕರು ಅರ್ಜಿ ಸಲ್ಲಿಸಿದ್ದರು.