ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಅವಹೇಳನ ಮಾಡಿದ ಆರೋಪ: ಪವನ್‌ ಖೇರಾ ಬಂಧನ, ಬಿಡುಗಡೆ

Last Updated 23 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ತಪ್ಪಾಗಿ ಹೇಳಿ ಅವಹೇಳನ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಪಿ.ಎಸ್‌. ನರಸಿಂಹ ಅವರಿದ್ದ ಪೀಠವು ಖೇರಾ ಅವರಿಗೆ ಇದೇ 28ರವರೆಗೆ ಬಂಧನದಿಂದ ರಕ್ಷಣೆ ಕೊಟ್ಟಿದೆ.

ಪವನ್‌ ಖೇರಾ ಅವರು ನೀಡಿದ್ದ ಹೇಳಿಕೆಯ ವಿಡಿಯೊ ದೃಶ್ಯಗಳನ್ನು ಪೀಠವು ನೋಡಿದೆ. ಬಳಿಕ, ‘ಬಂಧನದಿಂದ ರಕ್ಷಣೆ ನೀಡಿದ್ದೇವೆ. ಆದರೆ, ಮಾತಿನಲ್ಲಿ ಒಂದು ಮಟ್ಟದ ಘನತೆ ಇರಬೇಕು’ ಎಂದಿತು.

ದೆಹಲಿಯಿಂದ ರಾಯಪುರಕ್ಕೆ ಹೋಗಬೇಕಿದ್ದ ವಿಮಾನವೇರಿದ್ದ ಖೇರಾ ಅವರನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದರು. ರಾಯಪುರದಲ್ಲಿ ಶುಕ್ರವಾರ ಆರಂಭವಾಗಲಿರುವ ಕಾಂಗ್ರೆಸ್‌ ಪಕ್ಷದ ಮಹಾಧಿವೇಶನದಲ್ಲಿ ಭಾಗವಹಿಸಲು ಅವರು ಹೊರಟಿದ್ದರು.

ಖೇರಾ ಅವರು ನೀಡಿದ್ದ ಹೇಳಿಕೆಗೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ಒಂದೇ ಹೇಳಿಕೆಗೆ ಹಲವೆಡೆ ಎಫ್‌ಐಆರ್‌ ದಾಖಲಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಖೇರಾ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು.

ಇದು ಅಲಕ್ಷ್ಯದ ಮಾತೇ ಹೊರತು ಅಸಮರ್ಪಕ ಅಲ್ಲ. ಅದಲ್ಲದೆ, ಈ ರೀತಿ ಮಾತನಾಡಿದ್ದನ್ನು ಅವರು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಖೇರಾ ಅವರು ಬೇಷರತ್‌ ಕ್ಷಮೆಯನ್ನೂ ಕೇಳುತ್ತಾರೆ. ಅವರ ಮೇಲೆ ಲಖನೌ, ವಾರಾಣಸಿ ಮತ್ತು ಅಸ್ಸಾಂನಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸಿಂಘ್ವಿ ಹೇಳಿದರು.

ಎಲ್ಲ ಎಫ್‌ಐಆರ್‌ಗಳನ್ನು ಒಟ್ಟು ಸೇರಿಸಿ ತನಿಖೆ ನಡೆಸಬೇಕು ಎಂಬ ಮನವಿಗೆ ಸಂಬಂಧಿಸಿ ಉತ್ತರ ಪ್ರದೇಶ ಮತ್ತು ಅಸ್ಸಾಂ ಪೊಲೀಸರಿಗೆ ನೋಟಿಸ್‌ ನೀಡಲಾಗಿದೆ. ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

ಅಸ್ಸಾಂ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರು ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತೆಯ ಚುನಾಯಿತ ಪ್ರಧಾನಿಯ ವಿರುದ್ಧ ಆರೋಪಿಯು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾದ ಅವರನ್ನು ಸಂಬಂಧಪ‍ಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪ್ರಯಾಣಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು. ಜಾಮೀನು ಅರ್ಜಿಯನ್ನು ಅವರು ಅಲ್ಲಿಯೇ ಸಲ್ಲಿಸಬಹುದು ಎಂದು ವಾದಿಸಿದರು.

ಐಪಿಸಿ ಸೆಕ್ಷನ್‌ 153ಎ, 153ಬಿ, 295, 500, 504 ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ಸೆಕ್ಷನ್‌ ಅಡಿಯಲ್ಲಿ ಸಾಬೀತು ಮಾಡಬಹುದಾದ ಯಾವುದೇ ಅಪರಾಧವನ್ನು ಖೇರಾ ಅವರು ಎಸಗಿಲ್ಲ. ಅದಲ್ಲದೆ, ಅವರು ಎಸಗಿದ್ದಾರೆ ಎಂದು ಹೇಳಲಾಗುವ ಅಪರಾಧವು ಏಳು ವರ್ಷಗಳಷ್ಟು ಶಿಕ್ಷೆ ವಿಧಿಸಬಹುದಾದ ಕೃತ್ಯ ಅಲ್ಲ. ಹಾಗಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯ 41ಎ ಅಡಿಯಲ್ಲಿ ಬಂಧಿಸುವ ಅವಶ್ಯಕತೆಯೂ ಇಲ್ಲ ಎಂದು ಸಿಂಘ್ವಿ ವಾದಿಸಿದರು.

ಮುಂಬೈನಲ್ಲಿ ಇದೇ 17ರಂದು ಮಾಧ್ಯಮಗೋಷ್ಠಿ ನಡೆಸಿದ್ದ ಖೇರಾ ಅವರು, ನರೇಂದ್ರ ಗೌತಮ್‌ದಾಸ್‌ ಮೋದಿ ಎಂದು ಹೇಳಿ ಬಳಿಕ ತಪ್ಪು ತಿದ್ದಿಕೊಂಡು ನರೇಂದ್ರ ದಾಮೋದರ ದಾಸ್‌ ಮೋದಿ ಎಂದು ಹೇಳಿದ್ದರು.

ಕಾಂಗ್ರೆಸ್ ಮುಖಂಡರು ವಿಮಾನದ ಸಮೀಪ ಧರಣಿ ನಡೆಸಿದರು
ಕಾಂಗ್ರೆಸ್ ಮುಖಂಡರು ವಿಮಾನದ ಸಮೀಪ ಧರಣಿ ನಡೆಸಿದರು

ನಾಟಕೀಯ ಬೆಳವಣಿಗೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಖೇರಾ ಅವರನ್ನು ಬಂಧಿಸುವ ಹೊತ್ತಿಗೆ ತ್ವರಿತವಾಗಿ ಹಲವು ಘಟನೆಗಳು ನಡೆದು ಹೋದವು.

ಖೇರಾ ಅವರು ಪ್ರಯಾಣಿಸಲು ಉದ್ದೇಶಿಸಿದ್ದ ಇಂಡಿಗೊ ವಿಮಾನದಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರೂ ಇದ್ದರು. ಖೇರಾ ಅವರನ್ನು ಸಿಬ್ಬಂದಿಯು ವಿಮಾನದಿಂದ ಇಳಿಸುವ ಹೊತ್ತಿಗೆ ಹೆಚ್ಚಿನ ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತಿದ್ದರು. ಆರಂಭದಲ್ಲಿ ಲಗೇಜ್‌ಗೆ ಸಂಬಂಧಿಸಿದ ಗೊಂದಲ ಎಂದೇ ಪ್ರಯಾಣಿಕರು ಭಾವಿಸಿದ್ದರು. ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸುರ್ಜೇವಾಲಾ ಅವರೂ ಖೇರಾ ಅವರೊಂದಿಗೆ ಕೆಳಕ್ಕೆ ಇಳಿದರು. ಖೇರಾ ಅವರನ್ನು ಏಕೆ ಕೆಳಕ್ಕೆ ಇಳಿಸಲಾಗಿದೆ ಎಂದು ಸಿಬ್ಬಂದಿಯ ಜೊತೆಗೆ ವಾಗ್ವಾದ ನಡೆಸಿದರು.

ಸ್ವಲ್ಪ ಹೊತ್ತಿಗೆ ದೆಹಲಿ ಪೊಲೀಸರು ಸ್ಥಳಕ್ಕೆ ಬಂದು, ಅಸ್ಸಾಂ ಪೊಲೀಸರ ವಿನಂತಿಯಂತೆ ತಮ್ಮನ್ನು ವಶಕ್ಕೆ ಪಡೆದುಕೊಳ್ಳಬೇಕಾಗಿದೆ ಎಂದು ಖೇರಾ ಅವರಿಗೆ ಹೇಳಿದರು. ಆದರೆ, ಖೇರಾ ಅವರನ್ನು ಕರೆದೊಯ್ಯಲು ಕಾಂಗ್ರೆಸ್ ಮುಖಂಡರು ಅವಕಾಶ ಕೊಡಲಿಲ್ಲ. ಎಫ್‌ಐಆರ್‌ ಅಥವಾ ವಾರಂಟ್‌ ಇಲ್ಲದೆ ಕಳಿಸಲಾಗದು ಎಂದರು. ಅದೇ ವಿಮಾನದಲ್ಲಿದ್ದ ಮುಖಂಡರಾದ ಮಣಿಶಂಕರ್ ಅಯ್ಯರ್‌ ಮತ್ತು ತಾರೀಖ್‌ ಅನ್ವರ್ ಅವರೂ ಪ್ರತಿಭಟನೆಗೆ ಸೇರಿಕೊಂಡರು.

ವಿಮಾನದ ಹೊರಭಾಗದಲ್ಲಿಯೇ ಕಾಂಗ್ರೆಸ್ ಮುಖಂಡರು ಧರಣಿ ಕುಳಿತರು. ಪ್ರಧಾನಿ ನರೇಂದ್ರ ಮೋದಿ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಖೇರಾ ಅವರನ್ನು ವಶಕ್ಕೆ ಪಡೆಯಲು ನೆರವು ಕೋರಿ ಅಸ್ಸಾಂ ಪೊಲೀಸರು ಕಳುಹಿಸಿದ್ದ ಮನವಿಯನ್ನು ಪೊಲೀಸರು ತೋರಿಸಿ, ಖೇರಾ ಅವರನ್ನು ವಶಕ್ಕೆ ಪಡೆದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ವಿಮಾನವು ನಾಲ್ಕು ತಾಸು ತಡವಾಗಿ ಹೊರಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT