ನವದೆಹಲಿ: ಪೂಜಾ ಸ್ಥಳದ ಧಾರ್ಮಿಕ ಲಕ್ಷಣಗಳನ್ನು ಖಚಿತಪಡಿಸಿಕೊಳ್ಳುವುದನ್ನು 1991ರ ಪೂಜಾ ಸ್ಥಳ ಕಾಯ್ದೆಯಲ್ಲಿ ನಿರ್ಬಂಧಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೊ ಸಮೀಕ್ಷೆ ನಡೆಸಲು ವಾರಾಣಸಿ ಸಿವಿಲ್ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
‘ಈ ಕಾಯ್ದೆಯನ್ನು ಅಯೋಧ್ಯೆ ಪ್ರಕರಣದಲ್ಲಿ ಅನ್ವಯಿಸಲಾಗಿದೆ. ಪೂಜಾ ಸ್ಥಳದಲ್ಲಿನ ಧಾರ್ಮಿಕ ಲಕ್ಷಣಗಳನ್ನು ಖಚಿತಪಡಿಸಿಕೊಳ್ಳುವುದನ್ನು ಈ ಕಾಯ್ದೆಯ 3ನೇ ಸೆಕ್ಷನ್ ನಿರ್ಬಂಧಿಸುವುದಿಲ್ಲ’ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಹೇಳಿದೆ. ಅಯೋಧ್ಯೆ ಪ್ರಕರಣವನ್ನು ನಿರ್ವಹಿಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಚಂದ್ರಚೂಡ್ ಸಹ ಇದ್ದರು.
‘ಪಾರ್ಸಿಗಳ ಅಗ್ನಿದೇವಾಲಯವಿದೆ (ಅಗಿಯಾರಿ) ಎಂದಿಟ್ಟುಕೊಳ್ಳಿ. ಆ ದೇವಾಲಯದ ಸಂಕೀರ್ಣದ ಬೇರೆಡೆ ಶಿಲುಬೆ ಇದೆ ಎಂದಿಟ್ಟುಕೊಳ್ಳಿ. ದೇವಾಲಯ ಇದ್ದ ಕಾರಣಕ್ಕೆ ಶಿಲುಬೆಯು ಅಗಿಯಾರಿ ಆಗಿಬಿಡುತ್ತದೆಯೇ? ಶಿಲುಬೆ ಇರುವ ಮಾತ್ರಕ್ಕೆ ಅಗ್ನಿದೇವಾಲಯವು ಕ್ರೈಸ್ತರ ಪ್ರಾರ್ಥನೆಯ ಸ್ಥಳವಾಗಿಬಿಡುತ್ತದೆಯೇ? ಈ ರೀತಿಯ ಮಿಶ್ರ ಲಕ್ಷಣಗಳು ಇದ್ದರೆ, ವ್ಯಾಜ್ಯದ ಈ ವೇದಿಕೆಯನ್ನು ಮರೆತುಬಿಡಿ. ಈ ರೀತಿಯ ಮಿಶ್ರ ಲಕ್ಷಣಗಳು ಭಾರತಕ್ಕೆ ಹೊಸದೇನಲ್ಲ’ ಎಂದು ಪೀಠವು ಹೇಳಿದೆ. ‘1991ರ ಕಾಯ್ದೆ ಏನೆಂದು ಗುರುತಿಸುತ್ತದೆಯೆಂದರೆ, ಶಿಲುಬೆಯ ಇರುವಿಕೆ ಪಾರ್ಸಿ ದೇವಾಲಯವನ್ನು ಕ್ರೈಸ್ತ ಪ್ರಾರ್ಥನಾ ಸ್ಥಳವನ್ನಾಗಿಸುವುದಿಲ್ಲ. ಪಾರ್ಸಿ ಧಾರ್ಮಿಕ ಗುರುತು ಕ್ರೈಸ್ತ ಪ್ರಾರ್ಥನಾ ಸ್ಥಳವನ್ನು ಪಾರ್ಸಿ ದೇವಾಲಯವನ್ನಾಗಿಸುವುದಿಲ್ಲ’ ಎಂದು ಪೀಠವು ಹೇಳಿದೆ.
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವು ನಡೆಸುತ್ತಿರುವ ವಿಚಾರಣೆಯೂ ನಡೆಯಲಿ. ಹಾಗೆಂದು ಈ ಅರ್ಜಿಯನ್ನು ನಾವು ವಿಲೇವಾರಿ ಮಾಡುವುದಿಲ್ಲ. ಬದಲಿಗೆ ಈ ಅರ್ಜಿಯ ವಿಚಾರಣೆಯನ್ನು ನಾವು ಕಾಯ್ದಿರಿಸುತ್ತೇವೆ ಎಂದು ಪೀಠವು ಹೇಳಿದೆ.
ವಿಡಿಯೊ ಸಮೀಕ್ಷೆಯ ಆಯ್ದ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾಗುವುದು ನಿಲ್ಲಬೇಕು ಎಂದು ಪೀಠ ಹೇಳಿದೆ.
ಜ್ಞಾನವಾಪಿ ಮಸೀದಿ ಪ್ರಕರಣ ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರಿಸಿದ ಸುಪ್ರೀಂ ಕೋರ್ಟ್
ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಎಂದು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
‘ವಿಷಯದ ಸಂಕೀರ್ಣತೆ ಮತ್ತು ಸೂಕ್ಷ್ಮತೆ ದೃಷ್ಟಿಯಿಂದ ಈ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಂಗ ವ್ಯವಸ್ಥೆಯ ಹಿರಿಯ ಅಧಿಕಾರಿ ನಡೆಸುವುದು ಸೂಕ್ತ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಸ್ಥಳವನ್ನು ಸಿವಿಲ್ ವ್ಯಾಜ್ಯಕ್ಕೆ ಒಳಪಡಿಸಲು ಅವಕಾಶವಿಲ್ಲ ಎಂದು ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಿದೆಯೇ ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮೊದಲು ನಿರ್ಧರಿಸಲಿ ಎಂದೂ ಪೀಠ ಹೇಳಿದೆ.
ಶಿವಲಿಂಗ ಇದೆ ಎನ್ನಲಾಗಿರುವ ಪ್ರದೇಶಕ್ಕೆ ಭದ್ರತೆ ನೀಡಬೇಕು ಮತ್ತು ಮಸೀದಿ ಆವರಣದಲ್ಲಿ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಆದೇಶ ಮುಂದುವರೆಯಲಿದೆ. ಮಸೀದಿಗೆ ನಮಾಜು ಮಾಡಲು ಬರುವ ಮುಸ್ಲಿಮರಿಗೆ ಶುದ್ಧೀಕರಣ ಮಾಡಿಕೊಳ್ಳಲು ಸರಿಯಾದ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿಗೆ ಪೀಠವು ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.