ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಗಾಣಿಗ–ಗಾಣಿಗ ಲಿಂಗಾಯತ ಎರಡೂ ಒಂದೇ: ಸುಪ್ರೀಂ ಕೋರ್ಟ್‌

ಜಾತಿ ಪ್ರಮಾಣಪತ್ರ: ಐಎಎಸ್‌ ಅಧಿಕಾರಿ ಸಂಗಪ್ಪ ನೇಮಕಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
Last Updated 31 ಜುಲೈ 2022, 5:11 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಕರ್ನಾಟಕದಲ್ಲಿರುವ ಗಾಣಿಗೇರ್‌ ಮತ್ತು ಗಾಣಿಗ ಸಮುದಾಯಗಳು ಒಂದೇ ಆಗಿದ್ದು, ಹಿಂದೂ ಗಾಣಿಗ ಮತ್ತು ಗಾಣಿಗ ಲಿಂಗಾಯತ ಧರ್ಮಗಳು ಬೇರೆ ಬೇರೆ ಅಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಹಸನಪ್ಪ ಮಲೆಣ್ಣವರ್‌ ಅವರಿಗೆ ಗಾಣಿಗ ಜಾತಿ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸಿ ಒಬಿಸಿ ಮೀಸಲಾತಿ ಪಡೆಯುವಂತೆ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ 2017ರಲ್ಲಿ ಸೂಚಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ವಿಭಾಗೀಯ ಪೀಠ ರದ್ದುಪಡಿಸಿ ಸಂಗಪ್ಪ ಪರವಾಗಿ ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಎಂ.ವಿ.ಚಂದ್ರಕಾಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಾಹೇಶ್ವರಿ ಅವರಿದ್ದ ನ್ಯಾಯಪೀಠ ಶುಕ್ರವಾರ ವಜಾಗೊಳಿಸಿದೆ. ಸಂಗಪ್ಪ ಪರವಾಗಿ ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಚಂದ್ರಶೇಖರ್‌ ವಾದಿಸಿದ್ದರು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1999ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಗ್ರೂಪ್‌ ಎ ಹಾಗೂ ಬಿ ಹುದ್ದೆಗಳಿಗೆ ನೇಮಕಾತಿಯಾದ ಅಧಿಕಾರಿಗಳಲ್ಲಿ ಸಂಗಪ್ಪ ಅವರೂ ಒಬ್ಬರು. ಚಂದ್ರಕಾಂತ್‌ ಅವರು ಡಿವೈಎಸ್‌ಪಿ ಹಾಗೂ ಉಪವಿಭಾಗಾಧಿಕಾರಿ (ಜೂನಿಯರ್‌ ಗ್ರೇಡ್‌)ಹುದ್ದೆಗೆ ಸಂಗಪ್ಪ ಆಯ್ಕೆಯಾಗಿದ್ದರು. ಸಂಗಪ್ಪ ಅವರ ತಂದೆ ‘ಲಿಂಗಾಯತ’ ಜಾತಿಗೆ ಸೇರಿದವರು ಆದರೆ, ಸಂಗಪ್ಪ ಅವರು ‘ಗಾಣಿಗ’ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಮೀಸಲಾತಿಯ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಚಂದ್ರಕಾಂತ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ, ‘ಸಂಗಪ್ಪ ಅವರ ತಂದೆ ಹಿಂದೂ ಲಿಂಗಾಯತ ಜಾತಿಗೆ ಸೇರಿದವರು ಎಂದು ಶಾಲೆಯ ದಾಖಲೆಗಳು ಬಹಿರಂಗಪಡಿಸುತ್ತವೆ. ಆದ್ದರಿಂದ ಅವರ ಪುತ್ರ ಗಾಣಿಗ ಸಮುದಾಯ ಎಂದು ಹೇಳಿಕೊಂಡಿರುವುದು ಸರಿಯಲ್ಲ’ ಎಂದು ತೀರ್ಪು ನೀಡಿತ್ತು. ಆದರೆ, ವಿಭಾಗೀಯ ಪೀಠವು ಏಕ ಪೀಠದ ಆದೇಶವನ್ನು ತಳ್ಳಿಹಾಕಿತ್ತು.

ವಿಭಾಗೀಯ ಪೀಠದ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ‘ಸಂಗಪ್ಪ ಅವರ ತಂದೆ 1953ರಲ್ಲಿ ಶಾಲೆಗೆ ದಾಖಲಾದ ವೇಳೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪರಿಚಯಿಸಿರಲಿಲ್ಲ ಎಂಬ ಅಂಶವನ್ನು ಗಮನಿಸಿತು. ಆದರೆ, ಸಂಗಪ್ಪ ಅವರು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯವನ್ನು ಪರಿಚಯಿಸಲಾಗಿತ್ತು. ಆದ್ದರಿಂದ ಅವರ ತಂದೆಯ ಜಾತಿ ಕೇವಲ ‘ಲಿಂಗಾಯತ’ ಹಾಗೂ ಪುತ್ರದ ದಾಖಲಾತಿಯಲ್ಲಿ ‘ಹಿಂದೂ ಗಾಣಿಗ’ ಎಂದು ಉಲ್ಲೇಖಿಸಲ್ಪಟ್ಟಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

’ಲಿಂಗಾಯತ ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಹಿಂದೂ ವಿವಾಹ ಕಾಯ್ದೆ 1955, ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲಕತ್ವ ಕಾಯ್ದೆ 1956, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ 1956 ಪ್ರಕಾರ ಲಿಂಗಾಯತರು ಸಹ ಹಿಂದೂಗಳು ಎಂದು ಪರಿಗಣಿಸಲ್ಪಡುತ್ತಾರೆ. ಸಂಗಪ್ಪ ಅವರ ಜಾತಿಯನ್ನು ಅವರ ತಂದೆ ಶಾಲಾ ದಾಖಲಾತಿಗಳಲ್ಲಿ 'ಹಿಂದೂ-ಲಿಂಗಾಯತ' ಎಂದು ಉಲ್ಲೇಖಿಸಿದ್ದಾರೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿಚಾರಣೆ ವೇಳೆ, ಸಂಗಪ್ಪ ಅವರು 1909 ರ ನೋಂದಾಯಿತ ದಾಖಲೆಯನ್ನು ಸಲ್ಲಿಸಿದರು. ಅಲ್ಲಿ ಅವರ ತಾತನ ಜಾತಿಯನ್ನು 'ಗಾಣಿಗೇರ್' ಎಂದು ತೋರಿಸಲಾಗಿದೆ. ಆದ್ದರಿಂದ ಸಂಗಪ್ಪನ ಜಾತಿಯನ್ನು ‘ಗಾಣಿಗ’ ಎಂದು ಸಾಬೀತುಪಡಿಸಿದ ದಾಖಲೆಯು ಪ್ರಸ್ತುತವಾಗಿದೆ. ಸಂಗಪ್ಪ ಅವರು ತಮ್ಮ ಸಂಬಂಧಿಕರಿಗೆ ನೀಡಲಾದ ಜಾತಿ ಪ್ರಮಾಣಪತ್ರಗಳನ್ನು ಅವಲಂಬಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT