ನವದೆಹಲಿ: ‘ದ್ವೇಷದ ಮಾತು, ವದಂತಿ ಹಬ್ಬಿಸುವ ಪ್ರವೃತ್ತಿ ತಡೆಯಲು, ಅಂತರರಾಷ್ಟ್ರೀಯ ಕಾಯ್ದೆಗಳನ್ನು ಪರಾಮರ್ಶಿಸಿ ‘ಪರಿಣಾಮಕಾರಿ ಮತ್ತು ಕಠಿಣ ಕ್ರಮ’ ಜರುಗಿಸಲು ಸೂಚಿಸಬೇಕು’ ಎಂದು ಕೋರಿದ್ದ ಅರ್ಜಿಯನ್ನು ನವೆಂಬರ್ 22ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠವು ಈ ಸಂಬಂಧ ಗೃಹ, ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಮತ್ತು ಕಾನೂನು ಆಯೋಗಕ್ಕೆ ಮನವಿಯ ಪ್ರತಿ ಕಳುಹಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಅವರಿಗೆ ಸೂಚಿಸಿತು.
ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ವಕೀಲ ಅಶ್ವನಿ ದುಬೆ ಮೂಲಕ ಸಲ್ಲಿಸಿದ ಅರ್ಜಿ ಸಲ್ಲಿಸಿದ್ದರು. ದ್ವೇಷ ಭಾಷಣದ ಪಿಡುಗು ತಡೆಗೆ ಕಾನೂನಾತ್ಮಕ ಕ್ರಮ ಜರುಗಿಸಬೇಕು ಮತತು ಕಾನೂನು ಆಯೋಗವು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಈ ಸಂಬಂಧ ಬಂದಿರುವ ಮತ್ತೊಂದು ಅರ್ಜಿಯ್ನು ಅದೇ ದಿನ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಪೀಠವು ತಿಳಿಸಿತು.