ನವದೆಹಲಿ: ಜೀರಂ ಘಾಟಿ ನಕ್ಸಲ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗವು ಹೆಚ್ಚುವರಿ ಸಾಕ್ಷ್ಯಗಳ ವಿಚಾರಣೆ ನಡೆಸುವುದನ್ನು ವಿರೋಧಿಸಿರುವ ಛತ್ತೀಸಗಡ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಇದೇ 29ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಅಂದಿನ ದಾಳಿಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿ 29 ಜನರು ಬಲಿಯಾಗಿದ್ದರು.
ಹೆಚ್ಚುವರಿ ಸಾಕ್ಷ್ಯಗಳ ವಿಚಾರಣೆ ನಡೆಸುವುದನ್ನು ಪ್ರಶ್ನಿಸಿದ್ದ ಸರ್ಕಾರದ ಅರ್ಜಿಯನ್ನು ಈ ಮೊದಲು ಛತ್ತೀಸಗಡ ಹೈಕೋರ್ಟ್ ವಜಾ ಮಾಡಿತ್ತು. ಸಂಬಂಧಿತ ಅರ್ಜಿಯ ವಿಚಾರಣೆಯನ್ನು ಇದೇ 29ರಂದು ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ತಿಳಿಸಿತು.
2013ರ ಮೇ 25ರಂದು ಬಸ್ತರ್ ಜಿಲ್ಲೆಯ ದಾರ್ಭಾದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಂದ ಕುಮಾರ್ ಪಟೇಲ್, ವಿರೋಧಪಕ್ಷದ ಮಾಜಿ ಮುಖಂಡ ಮಹೇಂದ್ರ ಕರ್ಮಾ, ಕೇಂದ್ರದ ಮಾಜಿ ಸಚಿವ ವಿದ್ಯಾಚರಣ್ ಶುಕ್ಲಾ ಸೇರಿ ಒಟ್ಟು 29ಜನರು ಮೃತಪಟ್ಟಿದ್ದರು.