ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನದಿಂದ ಅಮಾನತುಗೊಂಡಿರುವ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ಬಿಜೆಪಿಯ 5 ಶಾಸಕರು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರ ನಡೆಯನ್ನು ಪ್ರಶ್ನಿಸಿ ಬುಧವಾರ ಕಲ್ಕತ್ತ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ.
ಈ ಕುರಿತ ಅರ್ಜಿಯನ್ನು ಹೈಕೋರ್ಟ್ ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಿದೆ ಎಂದು ಬಿಜೆಪಿ ಶಾಸಕರ ಪರ ವಕೀಲರೊಬ್ಬರು ತಿಳಿಸಿದ್ದಾರೆ.
ಮಾರ್ಚ್ 28ರಂದು, ಬಜೆಟ್ ಅಧಿವೇಶನದ ಕೊನೆಯ ದಿನ, ಅಶಿಸ್ತಿನ ನಡವಳಿಕೆಯ ಆರೋಪದಡಿ ಪ್ರಸಕ್ತ ವರ್ಷದ ಮುಂಬರುವ ಕಲಾಪಗಳಿಂದ ಐವರು ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.
ಅಧಿಕಾರಿ ಜೊತೆಗೆ ದೀಪಕ್ ಬರ್ಮನ್, ಶಂಕರ್ ಘೋಶ್, ಮನೋಜ್ ಟಿಗ್ಗಾ ಮತ್ತು ನರಹರಿ ಮಹತೊ ಅಮಾನತುಗೊಂಡ ಶಾಸಕರಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕುರಿತಾಗಿ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡಬೇಕು ಎಂದು ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದಾಗ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೋಲಾಹಲ ಏರ್ಪಟ್ಟಿತ್ತು.