ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗ: ಚೇತರಿಕೆಯ ಬಳಿಕವೂ ದೀರ್ಘಾವಧಿ ಬದುಕು ಸಾಧ್ಯತೆ ಕಡಿಮೆ- ಅಧ್ಯಯನ ವರದಿ

Last Updated 10 ಜುಲೈ 2022, 10:52 IST
ಅಕ್ಷರ ಗಾತ್ರ

ನವದೆಹಲಿ: ‘ಕ್ಷಯರೋಗ ಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾದ ನಂತರವೂ ರೋಗಿಗಳು ದೀರ್ಘಾವಧಿ ಬದುಕುವ ಸಾಧ್ಯತೆಗಳು ಕಡಿಮೆ’ ಎಂದು ಐಸಿಎಂಆರ್‌ನ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆಯ ನೂತನ ಅಧ್ಯಯನ ವರದಿ ತಿಳಿಸಿದೆ.

2025ರ ವೇಳೆಗೆ ಕ್ಷಯರೋಗವನ್ನು ಮುಕ್ತಗೊಳಿಸುವ ಗುರಿಯ ಸಾಧನೆಗೆ ಪೂರಕವಾಗಿ ಭಾರತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್‌ಟಿಇಪಿ) ಜಾರಿಗೊಳಿಸುತ್ತಿದೆ.

ಈಚಿನ ವರ್ಷಗಳಲ್ಲಿ ಚಿಕಿತ್ಸೆಯಲ್ಲಿ ಗಣನೀಯ ಸುಧಾರಣೆ ಹಾಗೂ ಸಾವಿನ ಪ್ರಮಾಣ ಕುಗ್ಗಿದ್ದರೂ ಕ್ಷಯರೋಗಿಗಳು ದೀರ್ಘಾವಧಿ ಜೀವಿಸುವ ಸಾಧ್ಯತೆಗಳು ಕಡಿಮೆ ಎಂಬ ಅಂಶ ಆತಂಕದ ವಿಷಯ ಎನ್ನುತ್ತಾರೆ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ (ಎನ್ಐಆರ್‌ಟಿ) ನಿರ್ದೇಶಕ ಡಾ. ಪದ್ಮಪ್ರಿಯದರ್ಶಿನಿ.

ಎನ್‌ಐಆರ್‌ಟಿ ನಡೆಸಿದ ನೂತನ ಅಧ್ಯಯನದ ಪ್ರಕಾರ, ಕ್ಷಯರೋಗ ಪೀಡಿತರಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡವರ ಸಾವಿನ ಸಾಧ್ಯತೆಗಳು, ರೋಗಪೀಡಿತರಲ್ಲದ ಸಾಮಾನ್ಯರಿಗೆ ಹೋಲಿಸಿದಲ್ಲಿ ಶೇಕಡ ಎರಡು ಪಟ್ಟು ಹೆಚ್ಚಿರುವುದು ದೃಢಪಟ್ಟಿದೆ.

ಒಟ್ಟಾರೆಯಾಗಿ 4,022 ಕ್ಷಯರೋಗ ಪೀಡಿತರು ಹಾಗೂ ವಿವಿಧ ವಯಸ್ಸಿನ, ಮಹಿಳೆ–ಪುರುಷರನ್ನು ಒಳಗೊಂಡ 12,243 ಮಂದಿ ರೋಗಪೀಡಿತರಲ್ಲದ ಸಾಮಾನ್ಯರಿಗೆ ಸಂಬಂಧಿಸಿರುವ ಅಂಕಿ ಅಂಶಗಳನ್ನು ಈ ಅಧ್ಯಯನ ವರದಿಯು ಆಧರಿಸಿದೆ.

ಅದರಲ್ಲಿಯೂ ಮಹಿಳೆಯರಿಗೆ ಹೋಲಿಸಿದಲ್ಲಿ ಕ್ಷಯರೋಗಪೀಡಿತ ಪುರುಷರಲ್ಲಿ ದೀರ್ಘಾವಧಿ ಬದುಕಿನ ಸಾಧ್ಯತೆಗಳು ಕಡಿಮೆ ಎಂದು ವರದಿ ಉಲ್ಲೇಖಿಸಿದೆ.

ಧೂಮಪಾನಿಗಳು, ಮದ್ಯಪಾನ ಮಾಡುವವರು ಹಾಗೂ ಇತರೆ ಜೀವಕ್ಕೆ ಅಪಾಯ ಹೆಚ್ಚಿರುವವರಲ್ಲಿ ಅಪಾಯದ ಸಾಧ್ಯತೆಗಳನ್ನು ಕುಗ್ಗಿಸಲು ಕ್ಷಯರೋಗ ಮತ್ತು ಅದರ ಪರಿಣಾಮಗಳ ಕುರತು ನಿರಂತರವಾಗಿ ಜಾಗೃತಿ ಮೂಡಿಸುವುದು, ಸಮಾಲೋಚನೆ ನಡೆಸುವುದು ಅಗತ್ಯ ಎಂದು ವರದಿ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT