ನವದೆಹಲಿ: ಮಾಹಿತಿ ತಂತ್ರಜ್ಞಾನದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿದ್ದು, ನೋಟಿಸ್ ನೀಡಿದ್ದಾರೆ.
ದ್ವೇಷದ ಮಾತುಗಳ ಪ್ರಸಾರಕ್ಕೆ ಫೇಸ್ಬುಕ್ ಅವಕಾಶ ನೀಡುತ್ತಿದೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ, ಫೇಸ್ಬುಕ್ ವಿರುದ್ಧ ಅನುಚಿತ ವರ್ತನೆ ಅರೋಪ ಮಾಡಿದ್ದ ತರೂರ್, ಈ ವಿಷಯ ಕುರಿತು ಚರ್ಚಿಸಲು ಸಮಿತಿಯ ಸಭೆ ಕರೆದಿದ್ದರು.
ಸಭೆ ಕರೆದ ತರೂರ್ ಅವರ ನಡೆಯನ್ನು ಪ್ರಶ್ನಿಸಿದ್ದ ದುಬೆ, ‘ಸಮಿತಿಯ ಸದಸ್ಯರೊಂದಿಗೆ ಚರ್ಚೆ ನಡೆಸದೇ ನಿರ್ದಿಷ್ಟ ವಿಷಯ ಕುರಿತು ಚರ್ಚಿಸುವ ಸಂಬಂಧ ಸಭೆ ಕರೆಯಲು ಸಂಸದೀಯ ಸಮಿತಿ ಅಧ್ಯಕ್ಷರಿಗೆ ಅಧಿಕಾರ ಇಲ್ಲ’ ಎಂಬುದಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.
ದುಬೆ ಅವರ ಈ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತರೂರ್ ಪತ್ರ ಬರೆದಿದ್ದಾರೆ. ‘ದುಬೆ ಅವರು ತಮ್ಮ ಹೇಳಿಕೆ ಮೂಲಕ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಇದು ಹಕ್ಕುಚ್ಯುತಿಯಾಗುವುದು’ ಎಂದು ತರೂರ್ ಕಿಡಿಕಾರಿದ್ದಾರೆ.