ಜೈಪುರ: ರಾಜಸ್ಥಾನದ ಭಾರತ್ಪುರ ಜಿಲ್ಲೆಯ ಸಿಕ್ರೊರಾ ಗ್ರಾಮದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಸೇರಿದಂತೆ ಮೂವರು ಸಹೋದರರನ್ನು ನೆರೆಮನೆಯ ವ್ಯಕ್ತಿ ಹಾಗೂ ಇತರರು ಸೇರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಾನ್ಸ್ಟೆಬಲ್ ಗಜೇಂದ್ರ ಸಿಂಗ್, ಸಮಂದರ್ ಸಿಂಗ್ ಮತ್ತು ಈಶ್ವರ್ ಸಿಂಗ್ ಎಂಬುವವರು ಮೃತಪಟ್ಟಿದ್ದು, ಗಜೇಂದ್ರ ಸಿಂಗ್ ಅವರ ಪತ್ನಿ, ಮಗ ಹಾಗೂ ಸೊಸೆ ಗಾಯಗೊಂಡಿದ್ದಾರೆ ಎಂದೂ ಹೇಳಿದ್ದಾರೆ.
ರಾಜಸ್ಥಾನ ಆರ್ಮ್ಡ್ ಕಾನ್ಸ್ಟಾಬ್ಯುಲರಿಯಲ್ಲಿ (ಆರ್ಎಸಿ) ಗಜೇಂದ್ರ ಸಿಂಗ್ ಕಾನ್ಸ್ಟೆಬಲ್ ಆಗಿದ್ದರು.
ಗಜೇಂದ್ರ ಸಿಂಗ್ ಅವರ ಮಗ ಹಾಗೂ ನೆರೆಮನೆಯ ಲಖನ್ ಎಂಬುವವರ ನಡುವೆ ಈಚೆಗೆ ಜಗಳ ನಡೆದಿತ್ತು. ಊರಿನ ಹಿರಿಯರು ಮಾತುಕತೆಯ ಮೂಲಕ ವಿವಾದ ಪರಿಹರಿಸಿದ್ದರು. ಆದರೆ ಲಖನ್ ಶನಿವಾರ ರಾತ್ರಿ 8ರಿಂದ 10 ಮಂದಿಯ ಜೊತೆ ಬಂದು ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.