ಶ್ರೀನಗರ: ಇಲ್ಲಿನ ಹೊರವಲಯದ ನೌಗಾಮ್ ಪ್ರದೇಶದಲ್ಲಿ ಬುಧವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಲಷ್ಕರ್–ಎ–ತೈಬಾದ (ಎಲ್ಇಟಿ) ಮೂವರು ಹತರಾಗಿದ್ದಾರೆ.
‘ಹತ್ಯೆಯಾದವರನ್ನು ಶೋಪಿಯಾನ್ನ ಆದಿಲ್ ತೇಲಿ, ಸಾಕಿಬ್ ತಂತ್ರಾಯ್ ಎಂದು ಗುರುತಿಸಲಾಗಿದ್ದು, ಹತ್ಯೆಯಾದ ಮೂರನೇ ವ್ಯಕ್ತಿ ಉಮರ್ ತೇಲಿ ಎಂದು ತಿಳಿದು ಬಂದಿದ್ದು, ಆತನ ಗುರುತು ಪತ್ತೆಗಾಗಿ ಕುಟುಂಬ ಸದಸ್ಯರನ್ನು ಕರೆದಿದ್ದೇವೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್ ತಿಳಿಸಿದರು.
‘ಹತ್ಯೆಯಾದ ಎಲ್ಇಟಿಯ ಈ ಮೂವರು ಉಗ್ರರು ಸ್ಥಳೀಯರಾಗಿದ್ದು, ಮಾರ್ಚ್ 9ರಂದು ಶ್ರೀನಗರದ ಖೋನ್ಮೋಹ್ ಪ್ರದೇಶದಲ್ಲಿ ನಡೆದಿದ್ದ ಪಿಡಿಪಿ ಸರಪಂಚ ಸಮೀರ್ ಅಹ್ಮದ್ ಭಟ್ ಅವರ ಹತ್ಯೆಯಲ್ಲಿ ಈ ಮೂವರು ಭಾಗಿಯಾಗಿದ್ದರು. ಹತ್ಯೆಯಾದವರಿಂದ ಒಂದು ಎಕೆ-47 ರೈಫಲ್ ಮತ್ತು ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.