ಜಮ್ಮು: ಹೊಸ ವರ್ಷದಂದು ಪ್ರಸಿದ್ಧ ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಕುರಿತು ತನಿಖೆ ನಡೆಸಲು ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಈ ಸಮಿತಿಯು ಘಟನೆ ಹಿಂದಿನ ನಿಖರ ಕಾರಣವನ್ನು ಪರಿಶೀಲಿಸಲಿದೆ. ಅಲ್ಲದೆ ಭವಿಷ್ಯದಲ್ಲಿ ಸಂಭವನೀಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಲಿದೆ.
ಪ್ರಧಾನ ಕಾರ್ಯದರ್ಶಿ (ಗೃಹ ಇಲಾಖೆ) ನೇತೃತ್ವದ ಸಮಿತಿಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇಮಕ ಮಾಡಿದ್ದಾರೆ. ಜಮ್ಮು ವಿಭಾಗೀಯ ಆಯುಕ್ತ ರಾಘವ ಲ್ಯಾಂಗರ್ ಮತ್ತು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಸಮಿತಿಯಲ್ಲಿದ್ದಾರೆ.