ಖಾನಾಕುಲ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಒಂದು ತಿಂಗಳೊಳಗೆ 'ತೃಣಮೂಲ ಕಾಂಗ್ರೆಸ್ ಆಶ್ರಯ ಪಡೆದ ಗೂಂಡಾಗಳನ್ನು' ಪತ್ತೆ ಹಚ್ಚಿ ಕಂಬಿಗಳ ಹಿಂದಕ್ಕೆ ಕಳುಹಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಕಟು ಮಾತುಗಳನ್ನಾಡಿದ್ದಾರೆ.
‘ಹೂಗ್ಲಿ ಜಿಲ್ಲೆಯ ಸುದರ್ಶನ್ ಪ್ರಮಾಣಿಕ್ ಸೇರಿದಂತೆ ಕೊಲೆಯಾದ ಬಿಜೆಪಿ ಕಾರ್ಯಕರ್ತರಿಗೆ ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನ್ಯಾಯ ಸಿಗಲಿದೆ. ಟಿಎಂಸಿ ಗೂಂಡಾಗಳೇ, ಎಚ್ಚರಿಕೆಯಿಂದ ಆಲಿಸಿ. ಮತಗಳ ಎಣಿಕೆಯ ನಂತರ, ನಾವು ನಿಮಗೆ ಪಾಠ ಕಲಿಸುತ್ತೇವೆ. ಉತ್ತರ ಪ್ರದೇಶದಲ್ಲೂ ಕೂಡ ನಾವು ಸರ್ಕಾರ ರಚಿಸಿದ ಬಳಿಕ ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಸಂಗತಿಗಳು ನಡೆದವು’ ಎಂದು ಅವರು ಹೇಳಿದರು.
'ಜನರನ್ನು ಹಿಂಸಿಸುವವರನ್ನು ನಾವು ಜೈಲಿಗೆ ಹಾಕಿದ್ದೇವೆ. ಬಂಗಾಳದಲ್ಲಿ ಸಿಂಡಿಕೇಟ್ ರಾಜ್ನ (ಗೂಂಡಾ ರಾಜ್ಯ) ಭಾಗವಾಗಿರುವವರಿಗೆ ಮತ್ತು ಕಟ್ ಮನಿ (ಕಮಿಷನ್) ಬೇಡಿಕೆ ಇಡುವವರಿಗೆ ನಾವು ಶಿಕ್ಷೆ ವಿಧಿಸುತ್ತೇವೆ' ಎಂದು ಆದಿತ್ಯನಾಥ್ ಹೇಳಿದರು.
ತನ್ನ 10 ವರ್ಷಗಳ ಆಳ್ವಿಕೆಯಲ್ಲಿ ಟಿಎಂಸಿ ಮುಖ್ಯಸ್ಥರು ತುಷ್ಟೀಕರಣದ ರಾಜಕೀಯ ಅನುಸರಿಸುವುದನ್ನು ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಂಗಾಳದಲ್ಲಿ ದುರ್ಗಾ ಪೂಜೆ, ಸರಸ್ವತಿ ಪೂಜೆ ಮತ್ತು ಹೋಳಿ ಆಚರಣೆಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸಿದ್ದಾರೆ, ಇದು ಉತ್ತರಪ್ರದೇಶದಲ್ಲಿ ಎಂದಿಗೂ ಸಂಭವಿಸುವುದಿಲ್ಲ. 'ನೀವು ಉತ್ಸವಗಳಲ್ಲಿ ಭಾಗವಹಿಸುವುದನ್ನು ತಡೆಯುವುದರಿಂದ ಪಾರಾಗಲು ಬಿಜೆಪಿಯನ್ನು ಆಯ್ಕೆ ಮಾಡಿ' ಎಂದು ಅವರು ಹೇಳಿದರು.
ಮಮತಾ 'ಜೈ ಶ್ರೀ ರಾಮ್' ಪಠಿಸುವುದಕ್ಕೆ 'ಅಲರ್ಜಿ'ಯಾಗುತ್ತದೆ. ಅವರಿಲ್ಲಿ ದುರ್ಗಾ ಪೂಜೆಗೆ ಅವಕಾಶ ನೀಡದ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವುದನ್ನು ಕೂಡ ವಿರೋಧಿಸುತ್ತಾರೆ ಎಂದರು.
ರಾಮ ದೇವಾಲಯದ ನಿರ್ಮಾಣಕ್ಕೆ ಮುಂದಾಗುವುದು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವುದು ಮುಂತಾದ ನಿರ್ಧಾರಗಳು ಬಿಜೆಪಿ 2019 ರ ಮತದಾನದ ಭರವಸೆಗಳನ್ನು ಈಡೇರಿಸಿದ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.
'ನನ್ನ ರಾಜ್ಯದಲ್ಲಿ 1.30 ಕೋಟಿ ಜನರಿಗೆ ಉಚಿತವಾಗಿ ವಿದ್ಯುತ್ ನೀಡಲಾಗಿದೆ, ಪ್ರತಿ ಬಡ ಕುಟುಂಬಕ್ಕೆ ಉಚಿತ ಪಡಿತರ ದೊರಕಿದೆ, ಎಲ್ಲರೂ ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಬರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಂಗಾಳದ ಜನರು ಕೇಂದ್ರ ಯೋಜನೆಗಳ ಪ್ರಯೋಜನದಿಂದ ವಂಚಿತರಾಗಿದ್ದಾರೆ ಮತ್ತು ಪ್ರಧಾನಿ ಕಿಸಾನ್ ನಿಧಿ ಯೋಜನೆಯಡಿ ರೈತರಿಗೆ 6,000 ರೂ. ಸಿಕ್ಕಿಲ್ಲ. ಕಳೆದ 10 ವರ್ಷಗಳಲ್ಲಿ ಸುಮಾರು 1,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.