ಪುರ್ಬಸ್ಥಳಿ, ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಿರುದ್ಧ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ವಾಗ್ದಾಳಿ ನಡೆಸಿದ್ದು, ‘ಟಿಎಂಸಿಯು ಭಯೋತ್ಪಾದನೆ, ಮಾಫಿಯಾ ಹಾಗೂ ಭ್ರಷ್ಟಾಚಾರದ ಪರ ನಿಂತಿದೆ’ ಎಂದಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಕೈಗೊಳ್ಳಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ಪಿಎಂಎವೈ) ಅನುಷ್ಠಾನದಲ್ಲಿ ಟಿಎಂಸಿಯು ಬೃಹತ್ ಪ್ರಮಾಣದ ಅಕ್ರಮಗಳನ್ನು ಎಸಗಿದೆ’ ಎಂದೂ ನಡ್ಡಾ ಆರೋಪಿಸಿದ್ದಾರೆ.
‘ಟಿಎಂಸಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ. ಮಮತಾ ಬ್ಯಾನರ್ಜಿ ಅವರ ಜಂಗಲ್ ರಾಜ್ ಅನ್ನು ಬಿಜೆಪಿ ಕೊನೆಗೊಳಿಸಲಿದೆ’ ಎಂದೂ ಅವರು ಹೇಳಿದರು.
‘ಪಿಎಂಎವೈ ಯೋಜನೆಯ ಲೆಕ್ಕಪರಿಶೋಧನೆ ವೇಳೆ ಭಾರಿ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ. ಎರಡು–ಮೂರು ಅಂತಸ್ತಿನ ಕಟ್ಟಡಗಳನ್ನು ಹೊಂದಿರುವವರೂ ಪಿಎಂಎಐ ಅಡಿ ಮನೆಗಳನ್ನು ಪಡೆದಿದ್ದಾರೆ. ಇದು ಇಲ್ಲಿನ ಸ್ಥಿತಿ’ ಎಂದು ತಿಳಿಸಿದರು.
‘ಪಶ್ಚಿಮ ಬಂಗಾಳವು ಮಹಿಳಾ ಮುಖ್ಯಮಂತ್ರಿಯನ್ನು ಹೊಂದಿದ್ದರೂ, ಮಹಿಳೆಯರ ವಿರುದ್ಧದ ಅಪರಾಧಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಎಲ್ಲ ಕಡೆಯೂ ಅವ್ಯವಹಾರ ಇದೆ. ಅದು ಎಸ್ಎಸ್ಸಿ ಅಥವಾ ಇತರ ಯಾವುದೇ ರೀತಿಯ ನೇಮಕಾತಿ ಆಗಿರಬಹುದು. ಉದ್ಯೋಗಗಳು ಇಲ್ಲಿ ಮಾರಾಟಕ್ಕಿವೆ’ ಎಂದು ಕಿಡಿಕಾರಿದರು.