ಕೋಲ್ಕತ್ತ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧಿ ಮನೇಕಾ ಗಂಭೀರ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಸೋಮವಾರ ಹಾಜರಾದರು.
ಸೋಮವಾರ ಮಧ್ಯಾಹ್ನ 12:30ಕ್ಕೆ ಬದಲಾಗಿ ರಾತ್ರಿ 12:30ಕ್ಕೆ ಹಾಜರಾಗುವಂತೆ ಇ.ಡಿ ‘ತಪ್ಪಾಗಿ’ ನೋಟಿಸ್ ನೀಡಿತ್ತು. ನಂತರ ಗಂಭೀರ್ಗೆ ಹೊಸ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತಮ್ಮ ವಕೀಲರ ಜತೆ ಸಾಲ್ಟ್ ಲೇಕ್ನಲ್ಲಿರುವ ಕೇಂದ್ರ ಕಚೇರಿಗೆ ಮಧ್ಯಾಹ್ನ 12.40ಕ್ಕೆ ಹಾಜರಾದರು.
ವಿದೇಶಕ್ಕೆ ತೆರಳಲು ಸಿದ್ದರಾಗಿದ್ದ ಮನೇಕಾ ಅವರನ್ನು ಸೆ.10 ರಂದು ಕೋಲ್ಕತ್ತ ವಿಮಾನ ನಿಲ್ದಾಣದಲ್ಲೇ ತಡೆದು ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.