ನವದೆಹಲಿ: ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ತೆರಳಿದ್ದ ತಮ್ಮ ಪಕ್ಷದ ಮುಖಂಡರನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ ಎಂದು ಟಿಎಂಸಿ ಶುಕ್ರವಾರ ಆರೋಪಿಸಿದೆ.
ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳುವ ನಿಟ್ಟಿನಲ್ಲಿತೃಣಮೂಲ ಕಾಂಗ್ರೆಸ್ ಸಂಸದರ ನಿಯೋಗವು ಹಾಥರಸ್ಗೆ ತೆರಳಿತ್ತು. ಆದರೆಸಂತ್ರಸ್ತೆ ಮನೆಯಿಂದ 1.5 ಕಿ.ಮೀ ದೂರದಲ್ಲಿ ನಿಯೋಗವನ್ನು ತಡೆ ಹಿಡಿಯಲಾಯಿತು ಎಂದು ಟಿಎಂಸಿ ಹೇಳಿದೆ.
ಈ ನಿಯೋಗದಲ್ಲಿ ಡೆರೆಕ್ ಒಬ್ರಯನ್, ಡಾ.ಕಾಕೊಲಿ ಘೋಷ್ ದಸ್ತಿದಾರ್, ಪ್ರತಿಮಾ ಮಾಂಡಲ್, ಮಮತಾ ಠಾಕೂರ್ ಇದ್ದರು.
‘ನಾವು ಸಂತ್ರಸ್ತ ರ ಪರಿವಾರಕ್ಕೆ ನಮ್ಮ ಸಂತಾಪ ತಿಳಿಸಲು ಶಾಂತವಾಗಿ ತೆರಳಿದ್ದೆವು. ಈ ವೇಳೆ ಎಲ್ಲಾ ರೀತಿಯ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ದೇವೆ. ಅಲ್ಲದೆ ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ಹೀಗಿದ್ದರೂ ಉತ್ತರ ಪ್ರದೇಶ ಪೊಲೀಸರು ನಮ್ಮನ್ನು ತಡೆದಿದ್ದಾರೆ. ಇದು ಎಂತಹ ಜಂಗಲ್ ರಾಜ್’ ಎಂದು ಸಂಸದರೊಬ್ಬರು ಪ್ರಶ್ನಿಸಿದ್ದಾರೆ.