ಅಗರ್ತಲ: ತ್ರಿಪುರಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ), ಭಾನುವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಪಶ್ಚಿಮ ಬಂಗಾಳದ ಮಾದರಿ ಅಭಿವೃದ್ಧಿಯ ಭರವಸೆ ನೀಡಿದೆ.
ಎರಡು ಲಕ್ಷ ಹೊಸ ಉದ್ಯೋಗ ಸೃಷ್ಟಿ, 4ರಿಂದ 8ನೇ ತರಗತಿಯ ಮಕ್ಕಳಿಗೆ ವಾರ್ಷಿಕ ₹1,000 ವಿದ್ಯಾರ್ಥಿ ವೇತನ, ನಿರುದ್ಯೋಗಿ ಯುವ ಜನತೆಗೆ ಸಮಾನ ಭತ್ಯೆ ಮತ್ತು ಪಶ್ಚಿಮ ಬಂಗಾಳದಲ್ಲಿರುವಂತೆಯೇ ಹಲವು ಸಮಾಜ ಕಲ್ಯಾಣಗಳ ಭರವಸೆ ನೀಡಿದೆ.
ಮೊದಲ ವರ್ಷದಲ್ಲೇ ಹೊಸದಾಗಿ 50,000 ಉದ್ಯೋಗ ಸೃಷ್ಟಿಸಲಾಗುವುದು. ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬರ್ತ್ಯಾ ಬಸು ಭರವಸೆ ನೀಡಿದ್ದಾರೆ.
ಉನ್ನತ ಶಿಕ್ಷಣ ಬಯಸುವವರಿಗೆ ಕೌಶಲ್ಯ ವಿಶ್ವವಿದ್ಯಾಲಯ, ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಮತ್ತು ಸುಲಭ ಸಾಲ ನೀಡುವುದಾಗಿ ಪ್ರಣಾಳಿಕೆ ತಿಳಿಸಿದೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆ ಚುನಾವಣೆ ಫೆಬ್ರುವರಿ 16ರಂದು ನಡೆಯಲಿದ್ದು, ಟಿಎಂಸಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.