ಅಗರ್ತಲಾ: ಕ್ರಿಮಿನಲ್ ಸಂಚು ಮತ್ತು ಹತ್ಯೆ ಯತ್ನದ ಆರೋಪದಡಿ ಬಂಧನಕ್ಕೀಡಾಗಿದ್ದ ತ್ರಿಪುರಾದ ಟಿಎಂಸಿ ಯುವ ಘಟಕದ ಅಧ್ಯಕ್ಷೆ ಸಯೊನಿ ಘೋಷ್ಗೆ ತ್ರಿಪುರಾದ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
₹ 20,000 ಜಾಮೀನು ಬಾಂಡ್ ಸಲ್ಲಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿದ್ದು, ತನಿಖೆಗೆ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಬಿ. ದಾಸ್ ಆದೇಶಿಸಿದ್ದಾರೆ ಎಂದು ಸಯೊನಿ ಘೋಷ್ ಪರ ವಕೀಲ ಶಂಕರ್ ಲೋಧ್ ಮಾಹಿತಿ ನೀಡಿದ್ದಾರೆ.
ಸಿಎಂ ಬಿಪ್ಲಬ್ ದೇಬ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಘೋಷಣೆ ಕೂಗುವ ಮೂಲಕ ಘೋಷ್, ಸಮಾಜದ ಸಮುದಾಯಗಳ ನಡುವೆ ಶಾಂತಿ ಕದಡುವ ಯತ್ನ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕ್ರಿಮಿನಲ್ ಸಂಚು ಮತ್ತು ಕೊಲೆ ಯತ್ನದ ಆರೋಪದ ಮೇಲೆ ಭಾನುವಾರ ಅವರನ್ನು ಬಂಧಿಸಲಾಗಿತ್ತು.
ಸಯೊನಿ ಜೊತೆಗಿದ್ದ ಕೆಲವರು ಮುಖ್ಯಮಂತ್ರಿಗಳ ಸಭೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವ ಘಟಕದ ಅಧ್ಯಕ್ಷೆ ಬಂಧನದ ಬಳಿಕ ಪೊಲೀಸ್ ಠಾಣೆ ಎದುರು ಸೇರಿದ್ದ ಟಿಎಂಸಿ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಪಕ್ಷ ಆರೋಪಿಸಿದೆ.