ಚೆನ್ನೈ: ಪ್ರಮಾಣ ವಚನ ಸ್ವೀಕರಿಸಿದ ದಿನವೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. 2 ಸಾವಿರ ರೂಪಾಯಿ ಕೋವಿಡ್ ಕಾಲದ ಪರಿಹಾರ, ಸರ್ಕಾರದ ಆವಿನ್ ಹಾಲಿನ ದರ ಕಡಿತ ಮತ್ತು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ.
ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಆದೇಶಗಳನ್ನು ಹೊರಡಿಸಿದ ಸ್ಟಾಲಿನ್, ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವಿಮಾ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದರು.
‘ಪಡಿತರ ಚೀಟಿ ಹೊಂದಿರುವ 2,07,67,000 ಜನರಿಗೆ ಮೇ ತಿಂಗಳಲ್ಲಿ ಮೊದಲ ಕಂತು ತಲಾ ₹ 2,000 ಕೋವಿಡ್ ಸಂಕಷ್ಟದ ಪರಿಹಾರ ನೀಡುವ ₹ 4,153.69 ಯೋಜನೆಯ ಆದೇಶಕ್ಕೆ ಮುಖ್ಯಮಂತ್ರಿ ಸಹಿ ಹಾಕಿದ್ದಾರೆ’ಪ್ರಕಟಣೆ ತಿಳಿಸಿದೆ.
ಮೇ 16 ರಿಂದ ಜಾರಿಗೆ ಬರುವಂತೆ ಸರ್ಕಾರ ಪೂರೈಸುವ ಆವಿನ್ ಹಾಲಿನ ಬೆಲೆಯಲ್ಲಿ ಲೀಟರ್ಗೆ ₹ 3 ಇಳಿಕೆ ಮಾಡಿ ಮತ್ತೊಂದು ಆದೇಶಕ್ಕೆ ಸಹಿ ಹಾಕಿದರು.
ಶನಿವಾರದಿಂದ ರಾಜ್ಯ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲಾ ಸಾಮಾನ್ಯ ಶುಲ್ಕ ನಗರ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಮತ್ತು ಈ ಉದ್ದೇಶಕ್ಕಾಗಿ ಸರ್ಕಾರವು 1,200 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ನಿಗದಿಪಡಿಸಿದ್ದು, ಈ ಮೂಲಕ ಮತ್ತೊಂದು ಚುನಾವಣಾ ಭರವಸೆ ಈಡೇರಿಸುತ್ತಿದ್ದೇವೆ ಎಂದು ಪ್ರಕಟಣೆ ತಿಳಿಸಿದೆ.