ನವದೆಹಲಿ: ಮರು ನಿಗದಿ ಮಾಡಿದ ದಿನಗಳಂದು ರಾಜ್ಯದಲ್ಲಿ ಪಥಸಂಚಲನ ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
‘ಆರ್ಎಸ್ಎಸ್ ಪಥಸಂಚಲನದಿಂದ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಲಿದೆ. ಹೀಗಾಗಿ, ಈ ಸಂಬಂಧ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕು’ ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
ಪಥಸಂಚಲನ ನಡೆಸಲು ಆರ್ಎಸ್ಎಸ್ಗೆ ಅನುಮತಿ ನೀಡಿ ಕಳೆದ ವರ್ಷ ನವೆಂಬರ್ 4ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠವು ಕೆಲ ನಿಬಂಧನೆಗಳನ್ನು ವಿಧಿಸಿತ್ತು.
ಪಥಸಂಚಲನವನ್ನು ಒಳಾಂಗಣ ಪ್ರದೇಶದಲ್ಲಿ ನಡೆಸಬೇಕು. ಬೇರೆ ದಿನಾಂಕಗಳನ್ನು ನಿಗದಿಪಡಿಸಬೇಕು, ಯಾವುದೇ ಪ್ರಚೋದನೆ ಇಲ್ಲದೇ ಶಾಂತಿಯುತವಾಗಿ ನಡೆಸಬೇಕು ಎಂದು ಸೂಚಿಸಿದ್ದ ಏಕಸದಸ್ಯ ಪೀಠವು, ಮೂರರ ಪೈಕಿ ಒಂದು ದಿನಾಂಕದಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಏಕಸದಸ್ಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಆರ್ಎಸ್ಎಸ್ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಮರು ನಿಗದಿ ಮಾಡಿದ ದಿನಾಂಕಗಳಂದು ಪಥಸಂಚಲನ ನಡೆಸಲು ಆರ್ಎಸ್ಎಸ್ಗೆ ಅನುಮತಿ ನೀಡಿ ಫೆ.10ರಂದು ಆದೇಶ ಹೊರಡಿಸಿತ್ತು.