ನವದೆಹಲಿ: ಕೋವಿಡ್–19 ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಕೊನೆಗೊಳಿಸಿರುವುದಾಗಿ ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಅವರು ಶನಿವಾರ ಸಂಜೆ ಘೋಷಿಸಿದ್ದಾರೆ.
ಕುಂಭಮೇಳ ಈಗ ಸಾಂಕೇತಿಕವಾಗಿ ನಡೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದ ಅವಧೇಶಾನಂದ ಗಿರಿ ಅವರು ಕುಂಭಮೇಳಕ್ಕೆ ಯಾರೂ ಬರಬಾರದು ಎಂದು ಕೋರಿದ್ದರು. ಇದೀಗ ಕುಂಭಮೇಳವನ್ನೇ ಕೊನೆಗೊಳಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
‘ಭಾರತ ಜನರು, ಅವರ ಜೀವದ ರಕ್ಷಣೆಯು ನಮ್ಮ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ. ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದರಿಂದ ವಿಧಿವತ್ತಾಗಿ ಕುಂಭಕ್ಕೆ ಆಹ್ವಾನಿಸಲಾಗಿದ್ದ ಎಲ್ಲ ದೇವತೆಗಳನ್ನು ವಿಸರ್ಜಿಸಲಾಗಿದೆ. ಜುನಾ ಅಖಾಡದ ವತಿಯಿಂದ ಕುಂಭಮೇಳವನ್ನು ವಿಧಿವತ್ತಾಗಿ ಸಮಾರೋಪಗೊಳಿಸಲಾಗಿದೆ’ ಎಂದು ಅವಧೇಶಾನಂದ ಅವರು ಟ್ವೀಟ್ ಮಾಡಿದ್ದಾರೆ.
भारत की जनता व उसकी जीवन रक्षा हमारी पहली प्राथमिकता है। #कोरोना महामारी के बढ़ते प्रकोप को देखते हुए हमने विधिवत कुम्भ के आवाहित समस्त देवताओं का विसर्जन कर दिया है। #जूनाअखाड़ा की ओर से यह कुम्भ का विधिवत विसर्जन-समापन है।@narendramodi @AmitShah@ANI @z_achryan @TIRATHSRAWAT pic.twitter.com/rOUaqL1egU
— Swami Avdheshanand (@AvdheshanandG) April 17, 2021
ಭಾಗವಹಿಸಿದ್ದವರಲ್ಲಿ ಕೋವಿಡ್ ದೃಢ: ಏಪ್ರಿಲ್ 10ರಿಂದ 14ರವರೆಗೆ ಕುಂಭಮೇಳದಲ್ಲಿ ಭಾಗವಹಿಸಿದ್ದ 1,700ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಇರುವುದು ಎರಡು ದಿನಗಳ ಹಿಂದಷ್ಟೇ ದೃಢಪಟ್ಟಿತ್ತು. ಕುಂಭಮೇಳದಲ್ಲಿ ಪಾಲ್ಗೊಂಡಿದ್ದವರ ಪೈಕಿ 2,36,751 ಮಂದಿಯನ್ನು ವೈದ್ಯಕೀಯ ಕಾರ್ಯಕರ್ತರು ಪರೀಕ್ಷೆಗೊಳಪಡಿಸಿದ್ದರು.
ವ್ಯಕ್ತವಾಗಿತ್ತು ವಿರೋಧ:ಕುಂಭಮೇಳವು ‘ಪ್ರಸಾದ’ ರೂಪದಲ್ಲಿ ಕೋವಿಡ್ ಹರಡುವ ತಾಣವಾಗಬಹುದು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಆತಂಕ ವ್ಯಕ್ತಪಡಿಸಿದ್ದರು. ಜತೆಗೆ, ಕಳೆದ ವರ್ಷ ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಮರ್ಕಜ್ಗೂ ಹೋಲಿಕೆ ಮಾಡಿದ್ದರು.
ಕೋವಿಡ್ ವ್ಯಾಪಕವಾಗಿ ಹರಡುತ್ತಿರುವಾಗ ಕುಂಭಮೇಳ ಆಯೋಜನೆ ಮಾಡುವುದು ಬೇಡವಾಗಿತ್ತು ಎಂದು ಹಿಮಾಚಲ ಪ್ರದೇಶ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಶಾಂತ ಕುಮಾರ್ ಸಹ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.