ಬೆಂಗಳೂರು: ತ್ರಿಪುರಾದಲ್ಲಿ ಇಬ್ಬರು ಪತ್ರಕರ್ತೆಯರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್ಡಬ್ಲ್ಯೂಎಫ್) ತೀವ್ರವಾಗಿ ಖಂಡಿಸಿದೆ.
ಮುಸ್ಲಿಂ ಸಮುದಾಯದ ಮೇಲೆ ಸಂಘ ಪರಿವಾರ ನಡೆಸಿದ ಹಲ್ಲೆ ಬಗ್ಗೆ ಮಾಡಿದ ವರದಿಯಿಂದ ಬೆದರಿಕೆ, ಕಿರುಕುಳ ಎದುರಿಸುತ್ತಿರುವ ಇಬ್ಬರು ಮಹಿಳಾ ಪತ್ರಕರ್ತೆಯರಿಗೆ ನ್ಯಾಷನಲ್ ವುಮೆನ್ಸ್ ಫ್ರಂಟ್ ಬೆಂಬಲ ನೀಡಿದೆ.
ರಾಜ್ಯದಲ್ಲಿ ಮುಸ್ಲಿಂ ಮಸೀದಿಗಳು ಮತ್ತು ಆಸ್ತಿಗಳ ಮೇಲಿನ ವಿಧ್ವಂಸಕ ದಾಳಿಗಳ ಕುರಿತು ಘಟನಾ ಸ್ಥಳದಿಂದಲೇ ಎಚ್ಡಬ್ಲ್ಯೂ ನ್ಯೂಸ್ ನೆಟ್ವರ್ಕ್ನ ಪತ್ರಕರ್ತರಾದ ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಝಾ ವರದಿ ಮಾಡಿದ್ದರು.
ಪೊಲೀಸರು ಈ ಕೂಡಲೇ ಇಬ್ಬರು ಮಹಿಳಾ ಪತ್ರಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದು ಅವರಿಗೆ ನಿರ್ಭಯವಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡಬೇಕು ಎಂದು ವುಮೆನ್ಸ್ ಫ್ರಂಟ್ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ತ್ರಿಪುರಾ ರಾಜ್ಯ ಸರ್ಕಾರದ ಪ್ರಯತ್ನಗಳ ವಿರುದ್ಧ ಎಲ್ಲಾ ಭಾರತೀಯರು ಧ್ವನಿ ಎತ್ತಬೇಕು ಎಂದೂ ಮನವಿ ಮಾಡಲಾಗಿದೆ.