ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ವಂಚನೆ ಹಗರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಂಧಿತರಾಗಿದ್ದ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ವಿಕಾಸ್ಖಾನ್ಚಂದಾನಿ ಅವರಿಗೆ ಮುಂಬೈ ಮೆಟ್ರೊಪಾಲಿಟನ್ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ವಿಕಾಸ್ ಅವರನ್ನು ಭಾನುವಾರ (ಡಿ.13) ಅವರ ಮನೆಯಲ್ಲೇ ಅಪರಾಧ ಗುಪ್ತಚರ ವಿಭಾಗದ (ಸಿಐಯು) ಪೊಲೀಸರು ಬಂಧಿಸಿದ್ದರು.
₹50 ಸಾವಿರ ನಗದು ಭದ್ರತಾ ಠೇವಣಿ ಪಡೆದು ನ್ಯಾಯಾಲಯವು ವಿಕಾಸ್ ಅವರಿಗೆ ಜಾಮೀನು ಮಂಜೂರು ಮಾಡಿತು ಎಂದು ಆರೋಪಿ ಪರ ವಕೀಲ ನಿತೀನ್ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಕೆಲ ಚಾನೆಲ್ಗಳು ಟಿಆರ್ಪಿಯಲ್ಲಿ ವಂಚನೆ ನಡೆಸಿವೆ ಎಂದು ಆರೋಪಿಸಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾವು ( ಬಾರ್ಕ್) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಪ್ರಕರಣ ದಾಖಲಿಸಿತ್ತು.
ಟಿಆರ್ಪಿಯಲ್ಲಿ ವಂಚನೆ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಕಾಸ್ ಅವರನ್ನು ಮುಂಬೈ ಪೊಲೀಸರು ಈ ಹಿಂದೆ ವಿಚಾರಣೆಗೆ ಒಳಪಡಿಸಿದ್ದರು. ಟಿಆರ್ಪಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ.