ಜಮ್ಮು: ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಇಬ್ಬರು ಮಾಜಿ ಶಾಸಕರೂ ಸೇರಿದಂತೆ 12 ಮಂದಿ ಪ್ರಮುಖರು ಭಾನುವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಬೆಳವಣಿಗೆಯ ಹಿಂದೆಯೇ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಮುಂದೆ ತನ್ನ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸಲಿದೆ ಎಂದು ಆ ಪಕ್ಷದ ಜಮ್ಮು ಮತ್ತು ಕಾಶ್ಮೀರದ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮಿರದ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ರೈನಾ ಅವರು ಪಕ್ಷ ಸೇರಿದದ ಹೊಸಬರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವೇಂದರ್ ಸಿಂಗ್ ರಾಣಾ ಮತ್ತು ಎಸ್.ಎಸ್.ಸ್ಲಾತಿಯಾ ಅವರು ಇದ್ದರು.
ರಾಣಾ ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ತಮ್ಮನಾಗಿದ್ದು, ನ್ಯಾಷನಲ್ ಕಾನ್ಫರೆನ್ಸನ ಅಧ್ಯಕ್ಷರಾಗಿದ್ದರು. ಇವರು ಮತ್ತು ಸ್ಲಾತಿಯಾ ಅಕ್ಟೋಬರ್ 10ರಂದು ನ್ಯಾಷನಲ್ ಕಾನ್ಫರೆನ್ಸ್ಗೆ ರಾಜೀನಾಮೆ ನೀಡಿದ್ದು, ಮಾರನೇ ದಿನ ಬಿಜೆಪಿ ಸೇರಿದ್ದರು.
ಭಾನುವಾರ ಎನ್ಸಿಯ ಮಾಜಿ ಶಾಸಕರಾದ ಪ್ರೇಮ್ ಸಾಗರ್ ಅಜೀಜ್, ಕಮಲ್ ಅರೋರಾ, ಮಾಜಿ ಉಪ ಮೇಯರ್ ಧರಂವೀರ್ ಸಿಂಗ್ ಜಮ್ವಾಲ್, ಚೌಧರಿ ಅರ್ಶಿದ್ ಅವರೂ ಬಿಜೆಪಿಗೆ ಸೇರ್ಪಡೆಯಾದರು.