ನವದೆಹಲಿ: ‘ಅಭಿವೃದ್ಧಿಯ ಹೆಸರಿನಲ್ಲಿ ಮಿತಿ ಮೀರಿದ ಹಾಗೂ ಸೂಕ್ತ ಯೋಜನೆಯಿಲ್ಲದ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದ್ದೇ ಜೋಶಿಮಠ ಭೂ ಕುಸಿತಕ್ಕೆ ಕಾರಣ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ವದೇಶಿ ಜಾಗರಣ್ ಮಂಚ್ (ಎಸ್ಜೆಎಂ) ಶನಿವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ತಜ್ಞರು, ಹಿಮಾಲಯ ಶ್ರೇಣಿಯನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಇದ್ದರೆ ನೈನಿತಾಲ್, ಮಸೂರಿ ಹಾಗೂ ಇತರ ಪ್ರದೇಶಗಳಲ್ಲೂ ಜೋಶಿಮಠದಲ್ಲಿ ಉದ್ಭವಿಸಿರುವ ಪರಿಸ್ಥಿತಿ ತಲೆದೋರಬಹುದು’ ಎಂದು ಎಚ್ಚರಿಸಿದ್ದಾರೆ.
‘ಚಾರ್ಧಾಮ್ ರಸ್ತೆ ವಿಸ್ತರಣೆ ಯೋಜನೆಯ ಮೇಲೆ ನಿಯಂತ್ರಣ ಹೇರಬೇಕು. ಆ ಮೂಲಕ ಭೂ ಭಾಗಕ್ಕೆ ಉಂಟಾಗಬಹುದಾದ ಹಾನಿಯನ್ನು ತಗ್ಗಿಸಬೇಕು. ಜೊತೆಗೆ ಚಾರ್ಧಾಮ್ ರೈಲ್ವೆ ಯೋಜನೆಯ ಕುರಿತು ಮರುಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.