ರಾಮಗಡ (ಜಾರ್ಖಂಡ್): ಅನುಕಂಪದ ನೆಲೆಯಲ್ಲಿ ಉದ್ಯೋಗ ಪಡೆಯಲು ನಿರುದ್ಯೋಗಿ ಮಗ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ರಾಮಗಡದಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
ಜಿಲ್ಲೆಯ ಬಾರ್ಕಕಾನದ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ನಲ್ಲಿ (ಸಿಸಿಎಲ್) ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಮ್ (55) ಎಂಬುವರನ್ನು ಗಂಟಲು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಅವರ ದೇಹ ಗುರುವಾರ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದರು.
ಅನುಕಂಪದ ನೆಲೆಯಲ್ಲಿ ತಂದೆಯ ಉದ್ಯೋಗ ಪಡೆಯಲು ಕೃಷ್ಣರಾಮ್ ಅವರ ಹಿರಿಯ ಮಗನೇ ಅವರನ್ನು ಕೊಂದಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಉಪ ವಿಭಾಗದ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹ್ತೊ ಅವರು ಮಾಹಿತಿ ನೀಡಿದರು.
ಹತ್ಯೆಗೆ ಬಳಸಲಾದ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಅವರು ತಿಳಿಸಿದರು.