ನವದೆಹಲಿ: ‘ನಿರುದ್ಯೋಗವು ದೇಶದ ಅತ್ಯಂತ ಜ್ವಲಂತ ಸಮಸ್ಯೆಯಾಗಿದೆ’ ಎಂದಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಈ ಕುರಿತು ಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಅವರು ತಮ್ಮ ಭಾಷಣವೊಂದರಲ್ಲಿ ನೀಡಿರುವ ಅಂಕಿ– ಅಂಶಗಳ ಕುರಿತು ಟ್ವೀಟ್ನಲ್ಲಿ ಶ್ಲಾಘಿಸಿದ್ದಾರೆ.
‘ನಿರುದ್ಯೋಗದ ಕುರಿತು ಇಡೀ ದೇಶದ ಮುಖಂಡರು ಸರ್ಕಾರದ ಗಮನ ಸೆಳೆಯಬೇಕು. ನಿರುದ್ಯೋಗಿ ಯುವಕರಿಗೆ ನ್ಯಾಯ ಸಿಗಬೇಕು. ಆಗ ಮಾತ್ರ ದೇಶ ಶಕ್ತಿಯುತವಾಗುತ್ತದೆ’ ಎಂದೂ ವರುಣ್ ಹೇಳಿದ್ದಾರೆ.
‘ನಿರುದ್ಯೋಗ ಕುರಿತು ನಾನು ಎತ್ತಿರುವ ಪ್ರಶ್ನೆಗಳನ್ನು ಒವೈಸಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಟ್ವೀಟ್ ಮಾಡಿರುವ ವರುಣ್, ಈ ಸಂಬಂಧ ಒವೈಸಿ ಅವರ ಭಾಷಣದ ವಿಡಿಯೊವೊಂದನ್ನು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.