ತಿರುಪತಿ: ಶನಿವಾರ ರಾತ್ರಿ ತಿರುಪತಿಗೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರು.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸಹ ಅಮಿತ್ ಶಾ ಅವರೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅರ್ಚಕರಿಂದ ಆಶೀರ್ವಾದ ಪಡೆದರು. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ಸುಬ್ಬಾ ರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಅಮಿತ್ ಶಾ ಅವರನ್ನು ಸನ್ಮಾನಿಸಿದರು.
ತಿರುಪತಿ ಸಮೀಪದ ರೇಣಿಗುಂಟಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಜಗನ್ ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ತಿರುಮಲದಲ್ಲಿ ದರ್ಶನ ಪಡೆದು, ಪದ್ಮಾವತಿ ಅತಿಥಿ ಗೃಹಕ್ಕೆ ತೆರಳಿ ರಾತ್ರಿಯ ಊಟ ಮಾಡಿದರು. ಅಲ್ಲಿಂದ ತಿರುಪತಿಗೆ ಸಾಗಿ ಸ್ಟಾರ್ ಹೊಟೇಲ್ ಒಂದರಲ್ಲಿ ತಂಗಿದರು.
Blessed to have offered prayers at the Sri Venkateswara Swamy Temple in Tirumala, Andhra Pradesh. May Lord Venkateswara bless everyone with peace and prosperity. pic.twitter.com/JFp7Ty3AIy
ಇಂದು ಬೆಳಿಗ್ಗೆ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ನೆಲ್ಲೂರ್ ಜಿಲ್ಲೆಯ ವೆಂಕಟಾಚಲಮ್ಗೆ ತೆರಳಿದ್ದಾರೆ. ಅವರು ಅಕ್ಷರ ವಿದ್ಯಾಲಯ, ಸ್ವರ್ಣ ಭಾರತಿ ಟ್ರಸ್ಟ್ ಮತ್ತು ಮುಪ್ಪವರಪು ಫೌಂಡೇಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನದ ವೇಳೆಗೆ ತಿರುಪತಿಗೆ ವಾಪಸ್ ಆಗಲಿರುವ ಅವರು ದಕ್ಷಿಣ ವಲಯದ ಕೌನ್ಸಿಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯ ಬಳಿಕ ತಿರುಪತಿಯಲ್ಲೇ ಉಳಿಯಲಿರುವ ಅಮಿತ್ ಶಾ, ನಾಳೆ ಪುನಃ ತಿರುಮಲ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರ ಮಧ್ಯಾಹ್ನ ದೆಹಲಿಗೆ ಮರಳಲಿದ್ದಾರೆ.