ಮುಂಬೈ: ಇಲ್ಲಿನ ಜುಹುನಲ್ಲಿರುವ ಬಂಗಲೆಗೆ ಅನಧಿಕೃತಮಾರ್ಪಾಡು ಮಾಡಿರುವ ಆರೋಪದ ಮೇಲೆ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ನೀಡಿದ ನೋಟಿಸ್ ವಿರುದ್ಧ ಕೇಂದ್ರ ಸಚಿವ ನಾರಾಯಣ ರಾಣೆ ಸೋಮವಾರ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ಎ.ಎ.ಸಯ್ಯದ್ ಅವರಿದ್ದ ವಿಭಾಗೀಯ ಪೀಠವನ್ನು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ರಾಣೆ ಪರ ವಕೀಲ ಅಮೋಘ್ ಸಿಂಗ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಬಂಗಲೆಯನ್ನು ಅನಧಿಕೃತವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಬಿಎಂಸಿ ಸಂಸದ ನಾರಾಯಣ್ ರಾಣೆ ಮತ್ತು ಅವರ ಕುಟುಂಬಕ್ಕೆ ಮೂರು ಬಾರಿ ನೋಟಿಸ್ ನೀಡಿತ್ತು. ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸುವಂತೆ ಬಿಎಂಸಿಗೆ ರಾಣೆ ಕೋರಿದ್ದರು.