ವಿಶ್ವಸಂಸ್ಥೆ: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಸಂಕೀರ್ಣವಾದ ವಿಷಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು(ಯುಎನ್ಎಸ್ಸಿ)ವಿಫಲವಾಗಿದೆ. ಈ ಮಂಡಳಿಯಲ್ಲಿ ಇರಬೇಕಾದ ರಾಷ್ಟ್ರಗಳ ಒಳಗೊಳ್ಳುವಿಕೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಭಾರತವು ಹೇಳಿದೆ.
ಯುಎನ್ಎಸ್ಸಿಯಲ್ಲಿ ತಕ್ಷಣದ ಸುಧಾರಣೆಗೆ ಭಾರತ, ಬ್ರೆಜಿಲ್, ಜಪಾನ್ ಹಾಗೂ ಜರ್ಮನಿಯು ಆಗ್ರಹಿಸುತ್ತಿದ್ದು, 15 ಸದಸ್ಯ ಸ್ಥಾನವಿರುವ ಈ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕೆ ಬೇಡಿಕೆ ಇರಿಸಿವೆ.
ಭದ್ರತಾ ಮಂಡಳಿಯಲ್ಲಿ ಸದಸ್ಯ ಸ್ಥಾನಗಳ ಹೆಚ್ಚಳ ಹಾಗೂ ಸಮಾನ ಪ್ರಾತಿನಿಧಿತ್ವಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ರಾಯಭಾರಿಗೆ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ‘ಈ ಕುರಿತು ಕ್ರಮ ಕೈಗೊಳ್ಳದೇ ಹೋದರೆ ತಕ್ಕ ಬೆಲೆಯನ್ನು ತೆರಬೇಕಾದೀತು. ಶಾಂತಿ ಹಾಗೂ ಭದ್ರತೆಗೆ ಸಂಬಂಧಿಸಿದಂತ ಸಂಕೀರ್ಣ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಮಂಡಳಿಯು ವಿಫಲವಾಗುತ್ತಿದೆ. ಒಳಗೊಳ್ಳುವಿಕೆ ಇರದ ಕಾರಣ ಮಂಡಳಿಯು ಔಚಿತ್ಯ ಹಾಗೂ ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿದೆ’ ಎಂದರು.