ಲಖನೌ: ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ (ಇಂದು) 4ನೇ ಹಂತದ ಮತದಾನ ಆರಂಭವಾಗಿದೆ.
ಕೊನೆ ಕ್ಷಣದ ಪ್ರಚಾರದ ವೇಳೆ ರಾಜಕೀಯ ಪಕ್ಷಗಳ ಪ್ರತಿಸ್ಪರ್ಧಿಗಳ ನಡುವಿನ ಕಿತ್ತಾಟವು ತೀವ್ರಗೊಂಡು, ಈ ಹಂತದ ಪ್ರಚಾರವು ಸೋಮವಾರ ಕೊನೆಗೊಂಡಿತು.
ಇಂದು ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದಲ್ಲಿ ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯ್, ಉನ್ನಾವೋ, ಲಖನೌ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ 624 ಅಭ್ಯರ್ಥಿಗಳ ಭವಿಷ್ಯ ನಿರ್ಧರವಾಗಲಿದೆ.
2017ರ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳನ್ನು ಬಿಜೆಪಿ, 4 ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ ಮತ್ತು 3 ಕ್ಷೇತ್ರಗಳನ್ನು ಬಹುಜನ ಸಮಾಜ ಪಕ್ಷ ಗೆದ್ದುಕೊಂಡಿತ್ತು. ಅಪ್ನಾ ದಳ್ 1 ಕ್ಷೇತ್ರವನ್ನು ಗೆದ್ದುಕೊಂಡಿತ್ತು.
ಲಖಿಂಪುರ ಖೇರಿಯಲ್ಲಿ ಜೀಪು ಹರಿಸಿ ನಾಲ್ವರು ರೈತರ ಹತ್ಯೆಯ ಆರೋಪ ಹೊತ್ತಿರುವ ಆಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪ್ರಭಾವ ಎಷ್ಟಿದೆ ಎಂಬುದನ್ನು ಈ ಹಂತವು ಸ್ಪಷ್ಟಪಡಿಸಲಿದೆ. ಹತ್ಯೆ ಪ್ರಕರಣವು ರೈತರಲ್ಲಿ ಭಾರಿ ಆಕ್ರೋಶ ಉಂಟು ಮಾಡಿದೆ. ಕಾಂಗ್ರೆಸ್ಗೂ ಈ ಹಂತವು ಅಗ್ನಿಪರೀಕ್ಷೆಯಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಮತದಾನ ನಡೆಯುತ್ತಿದೆ.