ನವದೆಹಲಿ: ‘ಆಕ್ಸಿಜನ್ ಮಾಸ್ಕ್ ಕೆಲಸ ಮಾಡುತ್ತಿಲ್ಲ. ಕರೆಗಂಟೆಯೂ ಕೆಲಸ ಮಾಡುತ್ತಿಲ್ಲ’ –ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸೆರ್ ಅಮಿರ್ ಹೀಗೇ ತಮ್ಮನಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸುತ್ತಾರೆ. ದೆಹಲಿಯ ಸರ್ಕಾರಿ ಆಸ್ಪತ್ರೆ ಹೊರಗಿದ್ದ ತಮ್ಮ ಅರ್ಸಲನ್ ಅಹ್ಮೆರ್ ಸಂದೇಶ ನೋಡುತ್ತಾರೆ. ಒಳಗೆ ಆತಂಕ, ಹೊರಗೆ ದುಗುಡ.
ಎರಡು ಗಂಟೆ ನಂತರ ಆಸ್ಪತ್ರೆಯಿಂದ ಅದೇ ಸಂಖ್ಯೆಯಿಂದ ಕರೆ ಬರುತ್ತದೆ. ಕರೆ ಮಾಡಿದವರು ತಮ್ಮನಲ್ಲ. ಕರೆ ಮಾಡಿದವ ‘ನಿಮ್ಮ ತಮ್ಮ ಇನ್ನಿಲ್ಲ’ ಎನ್ನುತ್ತಾರೆ. ಎರಡೂವರೆ ವರ್ಷದ ಪುತ್ರಿ, ಎಂಟು ತಿಂಗಳ ಮಗುವಿನ ತಂದೆ, 37 ವರ್ಷದ ಅಸ್ಸೆರ್ ಅಮಿರ್ ಕೋವಿಡ್ನಿಂದ ಮೃತಪಟ್ಟಿರುತ್ತಾರೆ. ಇವರು ಕೆಲ ದಿನದ ಹಿಂದೆ ಅಮೆರಿಕದಿಂದ ಬಂದಿದ್ದರು.
ಪತ್ನಿ, ಮಕ್ಕಳೊಂದಿಗೆ ನ್ಯೂಜೆರ್ಸಿಗೆ ತೆರಳಬೇಕಿತ್ತು. ‘ನನ್ನ ದಾಯಾದಿ ಸಾಯಲೆಂದೇ ಇಲ್ಲಿಗೆ ಬಂದರಾ?’ ಎಂದು ಅವರ ಸಂಬಂಧಿ ಫೌಜಿಯಾ ಸಿದ್ದಿಖ್ ಪ್ರಶ್ನಿಸುತ್ತಾರೆ. ದೆಹಲಿಯ ನಾರಾಯಣನಗರದ ನಿವಾಸಿಗಳಾದ ಆ ಕುಟುಂಬ ಇನ್ನೂ ಸಾವಿನ ಆಘಾತದಿಂದ ಹೊರಬರಲು ಆಗಿಲ್ಲ. ಅಸ್ಸೆರ್ ಅವರ ತಂದೆ–ತಾಯಿಗೂ ಕೋವಿಡ್ ದೃಢಪಟ್ಟಿದೆ.
ಅಸ್ಸೆರ್ ಅಹ್ಮದ್ ಅವರು ಅಮೆರಿಕದಲ್ಲಿಯೇ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದರು. ಇಲ್ಲಿ ಸೋಂಕು ದೃಢಪಟ್ಟ ನಂತರ ಮೊದಲು ಹೋಲಿ ಫ್ಯಾಮಿಲಿ ಆಸ್ಪತ್ರೆ ನಂತರ, ಇಎಸ್ಐಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಇಎಸ್ಐಸಿ ಆಸ್ಪತ್ರೆಯ ವೈದ್ಯರು ಭಾನುವಾರ ಬೆಳಿಗ್ಗೆ ಅವರನ್ನು ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡುವುದಾಗಿ ಹೇಳಿದ್ದರು. ಆ ವೇಳೆಗೆ ತಮ್ಮ ಆಯಾಸಗೊಂಡಿದ್ದರು. ಆಕ್ಸಿಜನ್ ಸಿಲಿಂಡರ್ ಸಿಗಬಹುದೇ ಎಂದು ಕೇಳಿದ್ದರು. ಆಕ್ಸಿಜನ್ ಸಿಲಿಂಡರ್ವರೆಗೆ ಹೋಗಲು ನೆರವಾಗಲೂ ನನಗೆ ಬಿಟ್ಟಿರಲಿಲ್ಲ. ಶಿಫ್ಟ್ ಮಾಡಿದಾಗ ಆಕ್ಸಿಜನ್ ಪ್ರಮಾಣ 90ರವರೆಗೂ ಇತ್ತು. ಭಾನುವಾರ ಬೆಳಿಗ್ಗೆ 8.08 ವಾಟ್ಸ್ ಆ್ಯಪ್ ಸಂದೇಶ ಬಂದಿತ್ತು. ಕೂಡಲೇ ಆಸ್ಪತ್ರೆ ಸಿಬ್ಬಂದಿಗೆ ಎಚ್ಚರಿಸಲು ಇವರು ಯತ್ನಿಸಿದರು. ಆದರೆ, ಫಲ ನೀಡಲಿಲ್ಲ.
ಆಗ, ಕಾಲಿಂಗ್ ಬೆಲ್ ಒತ್ತು. ಸಿಬ್ಬಂದಿ ಕರೆಸಲು ಮತ್ತೊಬ್ಬ ರೋಗಿಯ ನೆರವು ಪಡೆಯುವಂತೆ ಸಲಹೆ ಮಾಡಿ ಸಂದೇಶ ಕಳುಹಿಸಿದರು. ವಾಟ್ಸ್ಆ್ಯಪ್ ಸಂದೇಶದ ಅನುಸಾರ, ರೋಗಿ ಕಡೆಯಬಾರಿಗೆ ತಮ್ಮ ಫೋನ್ ಪರಿಶೀಲಿಸಿದ್ದು ಬೆಳಿಗ್ಗೆ 9.57 ಗಂಟೆಗೆ. ಮತ್ತೆ 11.15 ಗಂಟೆಗೆ ಆಸ್ಸೆರ್ ಮೃತಪಟ್ಟಿರುವ ಸುದ್ದಿ ಬಂದಿತು.
ಆಸ್ಪತ್ರೆಯಿಂದ ಸೂಕ್ತ ಆರೈಕೆ ಸಿಗಲಿಲ್ಲ. ಜೊತೆಗಿರಲು ನಮಗೆ ಅವಕಾಶ ನೀಡಿದ್ದರೂ ಉಳಿಯುತ್ತಿದ್ದ. ಇದು, ಆಸ್ಪತ್ರೆ ನಿರ್ಲಕ್ಷ್ಯವಲ್ಲದೇ ಮತ್ತೇನೂ ಅಲ್ಲ. ಚಿಕಿತ್ಸೆ ನೀಡಲಾಗದಿದ್ದ ಮೇಲೆ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದು ಏಕೆ? ಎಂದು ಅವರ ಸಂಬಂಧ ಫೌಜಿಯಾ ಪ್ರಶ್ನಿಸಿದರು. ಈ ಕುರಿತ ಪ್ರತಿಕ್ರಿಯೆಗೆ ಆಸ್ಪತ್ರೆ ಪ್ರತಿನಿಧಿಗಳು ಲಭ್ಯರಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.