ಪಟ್ನಾ: ಇಲ್ಲಿನ ಕೃಷಿ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಪ್ರಗತಿಪರ ರೈತರೊಬ್ಬರು ತಮ್ಮ ಯಶಸ್ಸಿನ ಕುರಿತು ಮಾತನಾಡುವಾಗ ಇಂಗ್ಲಿಷ್ ಪದಗಳನ್ನು ಹೆಚ್ಚು ಬಳಸಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ಬಿಹಾರದ 4ನೇ ಕೃಷಿ ಮಾರ್ಗಸೂಚಿ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ರೈತ, ಮ್ಯಾನೇಜ್ಮೆಂಟ್ ಪದವೀಧರ ಅಮಿತ್ ಕುಮಾರ್ ಎಂಬುವರು ತಮ್ಮನ್ನು ಖಲಿಸರೈ ಮೂಲಕದ ರೈತ ಎಂದು ಇಂಗ್ಲಿಷ್ನಲ್ಲಿ ಎಂದು ಪರಿಚಯಿಸಿಕೊಂಡು, ಮಾತು ಆರಂಭಿಸಿದರು. ಸ್ಥಳೀಯವಾಗಿ ಅಣಬೆ ಕೃಷಿ ಕುರಿತು ಮಾಹಿತಿ ನೀಡುವಾಗಲೂ ಅವರು ಹೆಚ್ಚು ಬಾರಿ ಇಂಗ್ಲಿಷ್ ಪದ ಬಳಸಿದರು.
ಇದರಿಂದ ಕೆರಳಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರೈತನನ್ನು ಮಧ್ಯದಲ್ಲೇ ತಡೆದು, ‘ಇದು ಬ್ರಿಟನ್ನಾ? ನೀವು ಬಿಹಾರದಲ್ಲಿ ಕೆಲಸ ಮಾಡುತ್ತಿರುವಿರಿ. ಅಲ್ಲದೇ, ಜನಸಾಮಾನ್ಯರ ವೃತ್ತಿಯಾದ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಿರಿ. ಹೀಗಿರುವಾಗ ನೀವಿಲ್ಲಿ ಇಂಗ್ಲಿಷ್ ಬಳಸುವ ಅಸಂಗತತೆಯನ್ನು ಹೇಳಲು ಬಯಸುತ್ತೇನೆ’ ಎಂದರು.
ನಿತೀಶ್ ಅವರ ಮಾತಿಗೆ ಸ್ಥಳದಲ್ಲಿದ್ದ ಜನರಿಂದ ಕರತಾಡನ ವ್ಯಕ್ತವಾಯಿತು. ಆದರೆ, ರೈತ ಅಮಿತ್ ಗಲಿಬಿಲಿಗೊಂಡು, ತಾವು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಬೋಧನಾ ಮಾಧ್ಯಮವು ಇಂಗ್ಲಿಷ್ ಆಗಿದ್ದುದರಿಂದ ಅದನ್ನೇ ಬಳಸಿದೆ ಎಂದು ಸಮಜಾಯಿಷಿ ನೀಡಿ, ಬಳಿಕ ಕ್ಷಮೆ ಯಾಚಿಸಿದರು.