ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ್‌ನಲ್ಲಿ ಅಧಿಕಾರಕ್ಕೆ ಬಂದರೆ ಉದ್ಯೋಗ ಮೀಸಲಾತಿ: ಕೇಜ್ರಿವಾಲ್‌ ಭರವಸೆ

ವಿಧಾನಸಭೆ ಚುನಾವಣೆ
Last Updated 19 ಸೆಪ್ಟೆಂಬರ್ 2021, 18:17 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಉತ್ತರಾಖಂಡ್‌ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನಿರುದ್ಯೋಗ ಭತ್ಯೆ ಮತ್ತು ಉದ್ಯೋಗದಲ್ಲಿ ಶೇಕಡ 80ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾನುವಾರ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನಡೆಯುತ್ತಿರುವ ವಲಸೆಯನ್ನು ಕೊನೆಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಆಮ್‌ ಆದ್ಮಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದರೆ ಉತ್ತರಾಖಂಡದ ಪ್ರತಿ ಯುವಕರಿಗೂ ಉದ್ಯೋಗ, ಉದ್ಯೋಗ ದೊರೆಯುವವರೆಗೆ ಕುಟುಂಬ ನಿರ್ವಹಣೆಗೆ ಪ್ರತಿಯೊಬ್ಬರಿಗೆ ಮಾಸಿಕ ₹ 5 ಸಾವಿರ, ರಾಜ್ಯದ ಜನರಿಗೆ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 80ರಷ್ಟು ಮೀಸಲಾತಿ, ಪಕ್ಷವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಒಂದು ಲಕ್ಷ ಉದ್ಯೋಗಾವಕಾಶ ಸೃಷ್ಟಿ ಸೇರಿದಂತೆ ಆರು ಭರವಸೆಗಳನ್ನು ಕೇಜ್ರಿವಾಲ್‌ ನೀಡಿದರು.

ದೆಹಲಿಯಲ್ಲಿರುವಂತೆ ರಾಜ್ಯದಲ್ಲಿ ಉದ್ಯೋಗ ಪೋರ್ಟಲ್‌ ಪ್ರಾರಂಭಿಸಲಾಗುವುದು. ಇದು ಉದ್ಯೋಗ ಹುಡುಕುವವರಿಗೆ ಮತ್ತು ನೀಡುವವರಿಗೆ ಸೂಕ್ತ ವೇದಿಕೆ ಒದಗಿಸುತ್ತದೆ. ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು ಎಂದು ಕೇಜ್ರಿವಾಲ್‌ ಹೇಳಿದರು.ಉತ್ತರಾಖಂಡದಲ್ಲಿ ಸರ್ಕಾರಗಳು ಸತತವಾಗಿ ರಾಜ್ಯದ ಸಂಪನ್ಮೂಲಗಳನ್ನು ಲೂಟಿ ಮಾಡುವುದನ್ನು ಬಿಟ್ಟು ಏನೂ ಮಾಡಿಲ್ಲ ಎಂದು ಅವರು ಆರೋಪಿಸಿದರು.

‘ನಾವು ಹೇಳಿದಂತೆಯೇ ಎಲ್ಲಾ ಭರವಸೆಗಳನ್ನೂ ಈಡೇರಿಸುತ್ತೇವೆ. ದೆಹಲಿಯಲ್ಲಿ ಮಾಡಿರುವಂತೆ ಇಲ್ಲಿಯೂ ರೈತರಿಗೆ ದಿನದ 24 ಗಂಟೆ ಅಥವಾ 300 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುತ್ತೇವೆ’ ಎಂದು ಕೇಜ್ರಿವಾಲ್‌ ಹೇಳಿದರು.

ಎಎಪಿಗೆ ಒಂದು ಅವಕಾಶ ನೀಡಿದರೆ ಉತ್ತರಾಖಂಡ ರಾಜ್ಯದ ಜನರ 21 ವರ್ಷಗಳ ದುಃಖವನ್ನು ಕೇವಲ 21 ತಿಂಗಳಲ್ಲಿ ಹೋಗಲಾಡಿಸಲು ಸಹಾಯ ಮಾಡುತ್ತದೆ. ದೆಹಲಿ ಮಾದರಿ ಅಭಿವೃದ್ಧಿಯನ್ನು ಇಲ್ಲಿಯೂ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT