ಡೆಹ್ರಾಡೂನ್: ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಿದರೆ ಏಕರೂಪದ ನಾಗರಿಕ ಸಂಹಿತೆ ರೂಪಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಹೇಳಿದರು.
ಈ ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು, ಚಿಂತಕರು ಇರಲಿದ್ದಾರೆ ಎಂದು ಚುನಾವಣಾ ಪ್ರಚಾರದ ಕೊನೆಯ ದಿನ ವಿಡಿಯೊ ಸಂದೇಶದಲ್ಲಿ ಘೋಷಿಸಿದರು.
ಮದುವೆ, ವಿಚ್ಛೇದನ, ಭೂಮಿಯ ಹಕ್ಕು ಮುಂತಾದ ವಿಚಾರಗಳ ಬಗ್ಗೆ ಸಮಿತಿಯು ಸಮಾಲೋಚನೆ ನಡೆಸಲಿದೆ ಎಂದಿದ್ದಾರೆ.
ಭಾರತದ ಸಂವಿಧಾನ ರಚಿಸಿದವರ ಕನಸು ನನಸಾಗಿಸಲು ಇರಿಸುವ ಹೆಜ್ಜೆ ಇದು. ಧರ್ಮದ ಹೊರತಾಗಿ ಸಮಾಜದ ಎಲ್ಲರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು ಎಂದು ಭಾರತೀಯ ಸಂವಿಧಾನದ ವಿಧಿ 44 ಹೇಳುತ್ತದೆ. ಈ ಕ್ರಮವು ವಿಧಿ 44ರ ಕಡೆಗೆ ಇರಿಸಿರುವ ಪ್ರಬಲ ಹೆಜ್ಜೆ ಎಂದು ಅವರು ಹೇಳಿದ್ದಾರೆ.
‘ಧಾಮಿಗೆ ಕಾನೂನು ಸಲಹೆ ಅಗತ್ಯವಿದೆ’
ನವದೆಹಲಿ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರುಏಕರೂಪ ನಾಗರಿಕ ಸಂಹಿತೆ ಕುರಿತು ನೀಡಿರುವ ಹೇಳಿಕೆಯನ್ನುಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಟೀಕಿಸಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ಸೋಲುತ್ತಿರುವುದು ಧಾಮಿ ಹೇಳಿಕೆಯಿಂದ ತಿಳಿಯುತ್ತಿದೆ. ಅವರಿಗೆ ಕಾನೂನು ಸಲಹೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಬಲ್ ‘ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಏಕರೂಪ ನಾಗರಿಕ ಸಂಹಿತೆ ರೂಪಿಸಲು ಸಮಿತಿ ರಚಿಸಲಾಗುವುದು ಎಂಬಂಥ ಹೇಳಿಕೆಗಳನ್ನು ನೀಡಿ ನಿಮ್ಮ ಪಕ್ಷ ಮತ್ತು ನಿಮ್ಮನ್ನು ಮುಜುಗರಕ್ಕೀಡು ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದಾರೆ.