ಡೆಹ್ರಾಡೂನ್: ಉತ್ತರಾಖಂಡದ ಪ್ರವಾಹಪೀಡಿತ ಪ್ರದೇಶಗಳಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್ಡಿಆರ್ಎಫ್) 300 ಮಂದಿಯನ್ನು ರಕ್ಷಿಸಿದೆ. ಮಳೆ ಸಂಬಂಧಿತ ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಎನ್ಡಿಆರ್ಎಫ್ನ 15 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಕುಮಾವೂಂ ಪ್ರದೇಶದಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದ್ದು, ಭೂಕುಸಿತದಿಂದ ಅನೇಕ ಮನೆಗಳು ಕುಸಿದುಬಿದ್ದಿವೆ. ಅನೇಕ ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.
‘ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಉಧಾಮ್ ಸಿಂಗ್ ನಗರ ಜಿಲ್ಲೆ ಮತ್ತು ಇತರ ಪ್ರವಾಹಪೀಡಿತ ಪ್ರದೇಶಗಳಿಂದ ನಮ್ಮ ತಂಡಗಳು 300ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿವೆ’ ಎಂದು ಎನ್ಡಿಆರ್ಎಫ್ ವಕ್ತಾರರು ಹೇಳಿದ್ದಾರೆ.
ಉಧಾಮ್ ಸಿಂಗ್ ನಗರದಲ್ಲಿ ಆರು ತಂಡಗಳು, ಉತ್ತರಕಾಶಿ ಮತ್ತು ಚಮೋಲಿಯಲ್ಲಿ ತಲಾ ಎರಡು ತಂಡಗಳು, ಡೆಹ್ರಾಡೂನ್, ಪಿತೋರಗಡ ಹಾಗೂ ಹರಿದ್ವಾರಗಳಲ್ಲಿ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೆರಡು ತಂಡಗಳನ್ನು ನೈನಿತಾಲ್ ಮತ್ತು ಅಲ್ಮೋರಾದಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ 24x7 ಸಹಾಯವಾಣಿ ತೆರೆಯಲಾಗಿದ್ದು, ರಾಜ್ಯದ ಅಧಿಕಾರಿಗಳ ಜತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಜನಪ್ರಿಯ ಪ್ರವಾಸಿ ತಾಣವಾಗಿರುವ ನೈನಿತಾಲ್ ಸಂಪರ್ಕಿಸುವ ಮೂರೂ ರಸ್ತೆಗಳು ಕುಸಿದಿವೆ. ಹೀಗಾಗಿ ನೈನಿತಾಲ್ಗೆ ಇರುವ ಎಲ್ಲ ರಸ್ತೆ ಸಂಪರ್ಕಗಳೂ ಸಂಪೂರ್ಣ ಕಡಿತಗೊಂಡಿವೆ.