ಡೆಹ್ರಾಡೂನ್: 2016ರ ಪ್ರತಿಭಟನೆ ವೇಳೆ ಪೊಲೀಸ್ ಕುದುರೆ ‘ಶಕ್ತಿಮಾನ್‘ ಗಾಯಗೊಂಡ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಚಿವ ಗಣೇಶ್ ಜೋಶಿ ಮತ್ತು ಇತರೆ ನಾಲ್ವರನ್ನು ಸಾಕ್ಷ್ಯಗಳ ಕೊರತೆಯ ಕಾರಣ ಉತ್ತರಾಖಂಡ ನ್ಯಾಯಾಲಯ ಖುಲಾಸೆಗೊಳಿಸಿದೆ.
ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಲಕ್ಷ್ಮಣ್ ಸಿಂಗ್ ಅವರು ಸಾಕ್ಷ್ಯಾಧಾರಗಳ ಕೊರತೆ ಕಾರಣ ಸಚಿವ ಗಣೇಶ್ ಜೋಷಿ ಮತ್ತು ಇತರೆ ನಾಲ್ವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದರು.
ಪ್ರತಿಭಟನೆ ವೇಳೆ ಉತ್ತರಾಖಂಡದ ಮೌಂಟೆಡ್ ಪೊಲೀಸ್ ಕುದುರೆ ಗಾಯಗೊಂಡಿತ್ತು. ಕುದುರೆ ಒಂದು ಹಿಂಬದಿಯ ಕಾಲನ್ನು ಕತ್ತರಿಸಿ, ಕೃತಕ ಕಾಲನ್ನು ಜೋಡಿಸಲಾಗಿತ್ತು. ಆದರೆ, ಒಂದು ತಿಂಗಳ ನಂತರ ಆ ಕುದುರೆ ಯಾವುದೋ ಸೋಂಕಿನಿಂದ ಸಾವನ್ನಪ್ಪಿತು.
ಘಟನೆಗೆ ಸಂಬಂಧಿಸಿದಂತೆ ಗಣೇಶ್ ಜೋಷಿ ಮತ್ತು ನಾಲ್ವರ ವಿರುದ್ಧ ಮಾರ್ಚ್ 2016ರಂದು ಐಪಿಸಿ ಸೆಕ್ಷನ್ 11ರ ಅಡಿ ಪ್ರಕರಣ ದಾಖಲಿಸಲಾಗಿತ್ತು.