ನವದೆಹಲಿ: ಪಡಿತರ ಗ್ರಾಹಕರಿಗೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯು ಬಡವರಿಗೆ ಹೊರೆಯಾಗಿ ಪರಿಣಮಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಿರಂಗವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ. ಇದೀಗ ಬಾವುಟಕ್ಕೆ ಬೆಲೆ ನಿಗದಿ ಮಾಡಿ, ಅವರಿಂದ ದುಡ್ಡನ್ನು ಕಿತ್ತುಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ವರುಣ್ ಗಾಂಧಿ ಹರಿಹಾಯ್ದಿದ್ದಾರೆ. ಇದು ಬಡವರ ಆಹಾರದ ಪಾಲನ್ನು ಕಿತ್ತುಕೊಳ್ಳುವುದಾಗಿದೆ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.
₹ 20 ಕೊಟ್ಟು ಬಾವುಟವನ್ನು ಖರೀದಿಸುವಂತೆ ಬಲವಂತಪಡಿಸುತ್ತಿರುವ ಬಗ್ಗೆ ಕೆಲವು ಪಡಿತರ ಗ್ರಾಹಕರು ಅಳಲು ತೋಡಿಕೊಳ್ಳುತ್ತಿರುವ ವಿಡಿಯೊವನ್ನು ಸಂಸದ ಪೋಸ್ಟ್ ಮಾಡಿದ್ದಾರೆ.
'75ನೇ ಸ್ವಾತಂತ್ರ್ಯೋತ್ಸವವು ಬಡವರ ಪಾಲಿಗೆ ಹೊರೆಯಾಗುತ್ತದೆ ಎಂದಾದರೆ ಇದೊಂದು ದುರದೃಷ್ಟಕರ ಸಂಗತಿ. ಬಾವುಟ ಖರೀದಿಸದಿದ್ದರೆಪಡಿತರ ನಿರಾಕರಿಸುವ ಮೂಲಕ ಖರೀದಿಸಲು ಬಲವಂತ ಮಾಡಲಾಗುತ್ತಿದೆ' ಎಂದು ವರುಣ್ ಗಾಂಧಿ ದೂರಿದ್ದಾರೆ.
'ಹರ್ ಘರ್ ತಿರಂಗ' ಅಭಿಯಾನದಡಿ ಪ್ರತಿಯೊಬ್ಬರೂ ಆಗಸ್ಟ್ 13-15ರಂದು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಬಿಜೆಪಿ ಭಾರಿ ಪ್ರಚಾರ ನಡೆಸುತ್ತಿದೆ.
ಇದೀಗ ಪಕ್ಷದ ಸಂಸದರೊಬ್ಬರು ರಾಷ್ಟ್ರಧ್ವಜವನ್ನು ಖರೀದಿಸಲು ಬಲವಂತ ಪಡಿಸುತ್ತಿದೆ ಎಂದು ಆರೋಪಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಜುಗರವಾಗಿ ಪರಿಣಮಿಸಿದೆ.
आजादी की 75वीं वर्षगाँठ का उत्सव गरीबों पर ही बोझ बन जाए तो दुर्भाग्यपूर्ण होगा।
— Varun Gandhi (@varungandhi80) August 10, 2022
राशनकार्ड धारकों को या तिरंगा खरीदने पर मजबूर किया जा रहा है या उसके बदले उनके हिस्से का राशन काटा जा रहा है।
हर भारतीय के हृदय में बसने वाले तिरंगे की कीमत गरीब का निवाला छीन कर वसूलना शर्मनाक है। pic.twitter.com/pYKZCfGaCV
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.