ಜುನಾಗಡ, ಗುಜರಾತ್: ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಮೂರು ದಿನಗಳ ಸಮಾವೇಶ ಶುಕ್ರವಾರ (ಡಿ.24) ಇಲ್ಲಿ ಆರಂಭಗೊಳ್ಳಲಿದೆ.
ದೇವಸ್ಥಾನಗಳ ಆಡಳಿತವನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎಂದು ವಿಎಚ್ಪಿ ಮೂಲಗಳು ಹೇಳಿವೆ.
‘ಪರಿಸರ ಸಂರಕ್ಷಣೆ, ಮತಾಂತರ ವಿರೋಧಿ ಕಾಯ್ದೆ ಜಾರಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಹ ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ’ ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತಿಳಿಸಿದ್ದಾರೆ.
‘ಕೆಲ ದೇವಸ್ಥಾನಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ. ಆಯಾ ಭಕ್ತರು–ಅನುಯಾಯಿಗಳಿಗೆ ದೇವಸ್ಥಾನಗಳ ಆಡಳಿತ ಜವಾಬ್ದಾರಿಯನ್ನು ಬಿಟ್ಟುಕೊಡಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆಯಾಗಿದೆ’ ಎಂದು ಸಂಘಟನೆಯ ರಾಷ್ಟ್ರೀಯ ಪ್ರಚಾರ–ಪ್ರಸಾರ ಪ್ರಮುಖ್ ವಿಜಯಶಂಕರ್ ತಿವಾರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಆದರೆ, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳ ಸಂಖ್ಯೆ ಎಷ್ಟು ಎಂಬ ಕುರಿತು ಅವರು ಮಾಹಿತಿ ನೀಡಲಿಲ್ಲ.