ನವದೆಹಲಿ: ಬಂಧನದಲ್ಲಿರುವ ಮಹಿಳೆಯ ಕನ್ಯತ್ವ ಪರೀಕ್ಷೆ ನಡೆಸುವುದು ಸಂವಿಧಾನಬಾಹಿರ. ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮಾ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ‘ಕಸ್ಟಡಿಯಲ್ಲಿರುವ ಮಹಿಳೆಯ ಘನತೆಗೆ ಧಕ್ಕೆಯಾಗಬಾರದು ಎಂಬ ಪರಿಕಲ್ಪನೆಯು ಪೊಲೀಸ್ ವಶದಲ್ಲಿದ್ದಾಗಲೂ ಆಕೆ ಘನತೆಯಿಂದ ಬದುಕುವ ಹಕ್ಕು ಹೊಂದಿರುತ್ತಾಳೆ ಎಂಬುದನ್ನು ಒಳಗೊಂಡಿದೆ’ ಎಂದು ಹೇಳಿತು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮಾತ್ರವಲ್ಲ, ಮಹಿಳೆಯು ನ್ಯಾಯಾಂಗ ಬಂಧನದಲ್ಲಿದ್ದಾಗ ಕನ್ಯತ್ವ ಪರೀಕ್ಷೆ ನಡೆಸುವುದು ಕೂಡ ಅಸಾಂವಿಧಾನಿಕ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.
‘ಆಕೆಯ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯುವ ನೆಪದಲ್ಲಿ ಕನ್ಯತ್ವ ಪರೀಕ್ಷೆ ನಡೆಸುವುದು ಮಹಿಳೆಯು ಸಂವಿಧಾನದತ್ತವಾಗಿ ಹೊಂದಿರುವ ಹಕ್ಕುಗಳ ಉಲ್ಲಂಘನೆಯಾಗಲಿದೆ’ ಎಂದೂ ನ್ಯಾಯಪೀಠ ಹೇಳಿತು.
ಸಿಬಿಐ ತನಗೆ ಕನ್ಯತ್ವ ಪರೀಕ್ಷೆಗೆ ಒಳಪಡುವಂತೆ ಒತ್ತಡ ಹೇರಿತು. ಪರೀಕ್ಷೆಯ ವರದಿಯನ್ನು ವಿಚಾರಣಾ ಕೋರ್ಟ್ಗೆ ಸಲ್ಲಿಸುವ ಮೊದಲೇ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತ್ತು ಎಂದು ದೂರಿ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.